ಸಿಂಗಾರೆವ್ವ ಹಾಗೂ ದೂರ ತೀರ ಯಾನದ ನಾಗಾಭರಣ
ನಾಗಾಭರಣರ ವ್ಯಕ್ತಿತ್ವವೇ ಅಂಥಾದ್ದು. ಇತ್ತ ಸಿನಿಮಾದಲ್ಲೂ ಸೈ. ಅದೇ ವೇಳೆಯಲ್ಲಿ ಕಿರುತೆರೆಯಲ್ಲೂ ಹಾಜರಿ! ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ಮಹತ್ವಾಕಾಂಕ್ಷೆಯ ಚಿತ್ರ 'ಸಿಂಗಾರೆವ್ವ"ದ ಕೆಸೆಟ್ ಬಿಡುಗಡೆಯಾಗಿ, ಸಿಂಗಾರೆವ್ವ ತೆರೆಗೆ ಸಿದ್ಧವಾಗುತ್ತಿದ್ದರೆ- ಇನ್ನೊಂದೆಡೆ ಕಿರುತೆರೆ ಧಾರಾವಾಹಿ ನಿರ್ಮಾಣದಲ್ಲೂ ನಾಗಾಭರಣ ತೊಡಗಿದ್ದಾರೆ. ಅವರದು ಎರಡು ದೋಣಿಯ ಪಯಣ. ಯಶಸ್ಸು ಸಿಗುತ್ತದೋ ಇಲ್ಲವೋ- ದುಡ್ಡಿಗಂತೂ ಮೋಸವಿಲ್ಲ ಅನ್ನೋದು ಭರಣರನ್ನು ಹತ್ತಿರದಿಂದ ಬಲ್ಲವರ ಹೇಳಿಕೆ.
ಸಿಂಗಾರೆವ್ವನ ಕೆಸೆಟ್ಟು ಇತ್ತೀಚೆಗಷ್ಟೇ ಮೈಸೂರಿನಲ್ಲಿ ಬಿಡುಗಡೆಯಾಯಿತು. ಇಂಥ ಸಿನಿಮಾ ಮಾಡಲು ನಾಗಾಭರಣರಿಂದಷ್ಟೇ ಸಾಧ್ಯ ಎಂದು ಕೆಸೆಟ್ ಬಿಡುಗಡೆ ಮಾಡಿದ 'ರಾಜ ನರಸಿಂಹ" ವಿಷ್ಣುವರ್ಧನ್ ಹೇಳಿದರು. ಯಜಮಾನ ಹೇಳಿದ ಮೇಲೆ ಒಪ್ಪಲೇಬೇಕು ಅಲ್ಲವೇ ?
'ಸಿಂಗಾರೆವ್ವ" ಸಿನಿಮಾದ ಬಗ್ಗೆ ಗಾಂಧಿನಗರದಲ್ಲೂ ಒಳ್ಳೆಯ ಮಾತು ಕೇಳಿಬರುತ್ತಿದೆ. ಪ್ರಶಸ್ತಿಗಳಂತೂ ಸಿಂಗಾರೆವ್ವನನ್ನು ಸಾಲುಗಟ್ಟಿ ಅಲಂಕರಿಸಲಿವೆ ಎಂಬುದು ಗಾಂಧಿನಗರ ಪಂಡಿತರ ಅಭಿಮತ. ತಾರಾಗಣದಲ್ಲಿ ಪ್ರೇಮಾ ಇರುವುದರಿಂದ ಕಮರ್ಷಿಯಲ್ ನಿಟ್ಟಲ್ಲೂ ಸಿನಿಮಾ ಯಶಸ್ಸು ಕಾಣಬಹುದೆನ್ನುವ ನಿರೀಕ್ಷೆ. 'ಮರ್ಮ" ಚಿತ್ರದಲ್ಲಿ ನಟಿಭಯಂಕರಿ ಎನ್ನುವುದನ್ನು ಸಾಬೀತು ಪಡಿಸಿರುವ ಪ್ರೇಮಾ, ಸಿಂಗಾರೆವ್ವನ ಪಾತ್ರವನ್ನು ಚೆನ್ನಾಗಿ ಸಿಂಗರಿಸಿರುವುದಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.
ಇದೆಲ್ಲಾ ಸಿನಿಮಾ ಕಥೆಯಾಯಿತು. ಕಿರುತೆರೆಗೆ ಬರೋಣ.
ಉದಯ ಟೀವಿಯಲ್ಲಿ ಪ್ರಸಾರವಾಗಿ ಅಕಾಲಿಕ ಅಂತ್ಯಕಂಡ 'ಜೀವನ್ಮುಖಿ" ಧಾರಾವಾಹಿಯ ಅಪಯಶಸ್ಸಿನಿಂದ ಕಂಗೆಟ್ಟಿಲ್ಲ ಎನ್ನುವಂತೆ ಭರಣ ಇದೀಗ ಇನ್ನೊಂದು ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಉದಯದ ಅಭಯ ಇನ್ನೂ ಇರುವುದರಿಂದ ಭರಣ ನಿಶ್ಚಿಂತರು. ಒಂದೇ ಒಂದು ಬದಲಾವಣೆಯೆಂದರೆ ಸ್ಲಾಟ್ ವೇಳೆ ಬದಲಾಗಿರುವುದು. ಮಧ್ಯಾಹ್ನ 12.30 ರ ಸ್ಲಾಟ್ ಭರಣಾಗೆ ದೊರೆತಿದೆ.
ಶಶಿ ದೇಶಪಾಂಡೆ ಅವರ ಕಥೆ ಆಧಾರಿತ 'ದೂರ ತೀನ ಯಾನ" ಧಾರಾವಾಹಿ ಡಿಸೆಂಬರ್ ತಿಂಗಳಲ್ಲೇ ಉದಯದ ಮೂಲಕ ಪ್ರೇಕ್ಷಕರ ಮನೆ-ಮನಸ್ಸಿಗೆ ಪ್ರಯಾಣ ಆರಂಭಿಸಲಿದೆ. ಅಪಘಾತ ಆಗದಿರಲಿ ಎಂದು ಹಾರೈಸುವ.


Click it and Unblock the Notifications