ಅಕ್ಟೋಬರ್ನಲ್ಲಿ ಕಾಟನ್ಪೇಟೆಗೆ ನಿಖಿತಾ ತುಕ್ರಲ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣದಲ್ಲಿ ಸಾಕಷ್ಟು ವಿವಾದಕ್ಕೆ ಗುರಿಯಾದ ನಟಿ ನಿಖಿತಾ ತುಕ್ರಲ್. ಇಷ್ಟೆಲ್ಲಾ ಗಲಾಟೆ ಗದ್ದಲ ಆದ ಮೇಲೂ ನಿಖಿತಾ ಕನ್ನಡ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚುತ್ತಾರಾ? ಆಕೆಯ ಮೇಲೆ ಈಗ ಯಾವುದೇ ನಿಷೇಧವೂ ಇಲ್ಲ ಒತ್ತಡವೂ ಇಲ್ಲ. ತಾವು ಮುಂದೆಯೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವುದಾಗಿ ನಿಖಿತಾ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಜೊತೆ 'ವಂಶಿ' ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ನಿಖಿತಾ ನಂತರ ಕನ್ನಡದಲ್ಲಿ ಬಹಳಷ್ಟು ಅವಕಾಶಗಳನ್ನು ಬಾಚಿಕೊಂಡರು. ಟ್ಯಾಕ್ಸಿ ನಂಬರ್ 1, ದುಬೈ ಬಾಬು, ಯೋಧ (ದರ್ಶನ್ ಜೊತೆ), ನಾರಿಯ ಸೀರೆ ಕದ್ದ, ಗನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ದರ್ಶನ್ ಚಿತ್ರ), ಪ್ರಿನ್ಸ್ (ದರ್ಶನ್ ಮತ್ತೊಂದು ಚಿತ್ರ) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಅಭಿನಯಿಸುತ್ತಿದ್ದಾರೆ.
ಈಗ ಆಕೆ ಸಹಿ ಹಾಕಿರುವ ಮತ್ತೊಂದು ಚಿತ್ರ ಕಾಟನ್ಪೇಟೆ. ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ನಲ್ಲಿ ಆರಂಭವಾಗಲಿದ್ದು ಮತ್ತೆ ಕರುನಾಡಿಗೆ ಪಾದಾರ್ಪಣೆ ಮಾಡುತ್ತಿರುವುದಾಗಿ ನಿಖಿತಾ ತಿಳಿಸಿದ್ದಾರೆ. ಅಂದಹಾಗೆ ಈ ಕಾಟನ್ಪೇಟೆ ಚಿತ್ರದ ಹೀರೋ ಯಾರು ಗೊತ್ತೆ? ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್.


Click it and Unblock the Notifications











