ಸಿನಿಮಾಗೆ ಜ್ಞಾನಪೀಠ ಸಾಹಿತಿಗಳ ಕೊಡುಗೆ ಬೇಕು!

ಕನ್ನಡ ಚಿತ್ರೋದ್ಯಮಕ್ಕೆ ಎಪ್ಪತ್ತೈದು ಸಂವತ್ಸರಗಳು ತುಂಬಿದ ಸವಿನೆನಪಿಗಾಗಿ ಭಾನುವಾರ(ಡಿ.21) ಸುಚಿತ್ರ ಫಿಲ್ಮ್ ಸೊಸೈಟಿ ಮತ್ತು ಕನ್ನಡನಿರ್ಮಾಪಕರ ಸಂಘ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಏರ್ಪಡಿಸಿತ್ತು. ವಿಚಾರ ಸಂಕಿರಣದಲ್ಲಿ ಡಾ.ಜಯಮಾಲಾ ಮಾತನಾಡುತ್ತಾ, ಟಿಕೆಟ್ ಗಳ ಬೆಲೆ ದುಬಾರಿಯಾಗಿರುವುದು ಮತ್ತು ಭದ್ರತಾ ಕಾರಣಗಳಿಗಾಗಿ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ತಲೆಹಾಕುತ್ತಿಲ್ಲ ಎಂದರು.
ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ಹಲವಾರು ಸಾಹಿತಿಗಳು ಚಿತ್ರರಂಗದೊಂದಿಗಿನ ಸಂಬಂಧವನ್ನು ಕಳಚಿಕೊಳ್ಳುತ್ತಿದ್ದಾರೆ. ಆದರೆ ನೆರೆ ರಾಜ್ಯಗಳಲ್ಲಿನ ಸಾಹಿತಿಗಳು ಚಿತ್ರರಂಗಕ್ಕೆ ತಮ್ಮ ಅಮೂಲ್ಯ ಕೊಡುಗೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಅಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳು ತೆರೆಕಾಣುತ್ತಿವೆ ಎಂದು ಜಯಮಾಲಾ ಅಭಿಪ್ರಾಯಪಟ್ಟರು. ಕರ್ಮರ್ಷಿಯಲ್ ಮತ್ತು ಪರ್ಯಾಯ ಸಿನಿಮಾಗಳ ನಡುವಿನ ಅಂತರವನ್ನು ಮುಚ್ಚಿಹಾಕಬೇಕಾಗಿದೆ. ಕರ್ಮರ್ಷಿಯಲ್ ಚಿತ್ರಗಳು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿವೆ. ಹಾಗೆಯೇ ಕಲಾತ್ಮಕ ಚಿತ್ರಗಳು ಜನಸಾಮಾನ್ಯರ ಬಳಿಗೆ ತಲುಪುವಂತಿರಬೇಕು ಎಂದರು.
ರೀಮೇಕ್ ಸಂಸ್ಕೃತಿಗೆ ವಿರೋಧ: ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ ಅಧ್ಯಕ್ಷ ವಿ.ಎನ್.ಸುಬ್ಬರಾವ್ ಮಾತನಾಡುತ್ತಾ, ರಾಜ್ಯಕ್ಕೆ ಕಾಲಿರಿಸಿರುವ ರೀಮೇಕ್ ಸಂಸ್ಕೃತಿ ಕನ್ನಡ ಸಿನಿಮಾಗಳ ಗುಣಮಟ್ಟವನ್ನು ಹಾಳು ಮಾಡುತ್ತಿದೆ. ಚಲನಚಿತ್ರೋತ್ಸವಗಳು ಕೇವಲ ಮೇಧಾವಿಗಳಿಗೆ ಮತ್ತು ಒಂದು ವರ್ಗದ ಪ್ರೇಕ್ಷಕರಿಗಾಗಿ ಮಾತ್ರ ಸೀಮಿತವಾಗಬಾರದು. ಹಾಗೆಯೆ ಚಿತ್ರೋತ್ಸವಗಳಲ್ಲಿ ಕಮರ್ಷಿಯಲ್ ಚಿತ್ರಗಳಿಗೂ ಸ್ಥಾನ ಕಲ್ಪಿಸಬೇಕು ಎಂದು ಅಭಿಪ್ರಾಯ ಪಟ್ಟರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ


Click it and Unblock the Notifications