ಸ್ವಾಮಿ ನಿತ್ಯಾನಂದ ಬಣ್ಣ ಬಯಲು ಮಾಡುವೆ: ಮದನ್
"ಸ್ವಾಮಿ ನಿತ್ಯಾನಂದ ಎಂದರೆ ಕೇವಲ ರಾಸಲೀಲೆಗಳಷ್ಟೇ ಅಲ್ಲ, ಆತ ಬಡಬಗ್ಗರ ಭೂಮಿಯನ್ನು ಕಬಳಿಸಿದ್ದಾನೆ. ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿರುವ ನಿಜವಾದ ಸ್ವಾಮೀಜಿಗಳು ತಲೆ ತಗ್ಗಿಸುವಂತೆ ಮಾಡಿದ್ದಾನೆ . ಆತನ ಎಲ್ಲಾ ಲೀಲೆಗಳನ್ನು ಬಯಲು ಮಾಡುತ್ತೇನೆ. ಇದಕ್ಕೆ ಯಾರು ಅಡ್ಡಿಬಂದರೂ ಚಿತ್ರವನ್ನು ಕೈಬಿಡುವುದಿಲ್ಲ" ಎಂದು ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮದನ್ ಪಟೇಲ್ ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ.
ಸ್ವಾಮಿ ನಿತ್ಯಾನಂದ ಕಥೆಯಾಧಾರಿತ ಚಿತ್ರದ ಜೊತೆಗೆ ಒಟ್ಟು ನಾಲ್ಕು ಚಿತ್ರಗಳನ್ನು ಪ್ರಕಟಿಸಿದ್ದಾರೆ ಮದನ್. ಮೂರು ಚಿತ್ರಗಳನ್ನು ನಿರ್ದೇಶಿಸುವ ಜವಾಬ್ದಾರಿಓಂ ಪ್ರಕಾಶ್, ದಯಾಳ್ ಪದ್ಮನಾಭನ್ ಹಾಗೂ ಈ ಎಂ ಗುರುಪ್ರಸಾದ್ (ಇವರು 'ಮಠ' ಗುರುಪ್ರಸಾದ್ ಅಲ್ಲ) ಅವರ ಹೆಗಲಿಗೆ ಹೊರಿಸಿದ್ದಾರೆ. ಮತ್ತೊಂದು ಚಿತ್ರಕ್ಕೆ ಸ್ವತಃ ಮದನ್ ಪಟೇಲ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ.
ಇನ್ನು ನಿತ್ಯಾನಂದನ ವಿಷಯಕ್ಕೆ ಬಂದರೆ, ಚಿತ್ರಕ್ಕೆ 'ಸತ್ಯಾನಂದ...ಎ ಟ್ರೂ ಸ್ಟೋರಿ ಆಫ್ ನಿತ್ಯಾನಂದ' ಎಂದು ಹೆಸರಿಡಲಾಗಿದೆ. ಬಿಜೆಪಿಯ ಸಕ್ರಿಯ ರಾಜಕಾರಣಿಯೂ ಆಗಿರುವ ಮದನ್ ಪಟೇಲ್ಗೆ ಪಕ್ಷದ ಕೆಲವು ರಾಜಕಾರಣಿಗಳು ಸತ್ಯಾನಂದ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಆದರೂ ಈ ಚಿತ್ರವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಮದನ್.
ಅಂದಹಾಗೆ ಸತ್ಯಾನಂದನ ಪಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ಹುಡುಕಿದ್ದು, ಆತ ಥೇಟ್ ನಿತ್ಯಾನಂದನಂತೆಯೇ ಕಾಣಿಸಲಿದ್ದಾನೆ ಎಂದು ಮದನ್ ವಿವರ ನೀಡಿದ್ದಾರೆ. ಆತ ಯಾರು, ಏನು, ಎತ್ತ ಎಂದು ತಿಳಿಯಬೇಕಾದರೆ ಡಿಸೆಂಬರ್ 31ರ ತನಕ ಕಾಯಬೇಕು. ಕಾರಣ ಚಿತ್ರದ ಸಂಪೂರ್ಣ ವಿವರಗಳನ್ನು ಅಂದು ಬಿಡುಗಡೆ ಮಾಡುತ್ತಿರುವುದಾಗಿ ಮದನ್ ತಿಳಿಸಿದ್ದಾರೆ.
ಆದರೆ ಸದ್ಯಕ್ಕೆ ಸ್ವಾಮಿ ನಿತ್ಯಾನಂದ ಪ್ರಕರಣ ಕೋರ್ಟ್ನ ಕಟಕಟೆಯಲ್ಲಿದೆ. ಈ ಚಿತ್ರಕ್ಕೆ ಅನುಮತಿ ಸಿಗುತ್ತದೋ ಇಲ್ಲವೋ? ಚಿತ್ರದ ಶೀರ್ಷಿಕೆ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನನ್ನುತ್ತದೋ?ಶೀರ್ಷಿಕೆ ನೋಂದಾಯಿಸಿಕೊಳ್ಳಲು ಅನುಮತಿ ನೀಡುತ್ತದೋ ಇಲ್ಲವೋ ಎಂಬ ಪ್ರಶ್ನೆಗಳು ಸದ್ಯಕ್ಕೆ ಎದುರಾಗಿವೆ. ಇವೆಲ್ಲವೂ ಗೊತ್ತಾಗಲು ಡಿಸೆಂಬರ್ 31ರ ತನಕ ಕಾಯಲೇಬೇಕು. [ಸ್ವಾಮಿ ನಿತ್ಯಾನಂದ]


Click it and Unblock the Notifications











