ಏಳೂವರೆ ಲಕ್ಷ ಪಡೆಯುವ ಸಂಭಾವಿತ ಶರಣ್
ಸಾಮಾನ್ಯವಾಗಿ ಹಾಸ್ಯನಟರೆಂದರೆ ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿಯಲ್ಲಿರುತ್ತಾರೆ. ಆದರೆ ಹಾಸ್ಯನಟ ಶರಣ್ ಮಾತ್ರ ಇದಕ್ಕೆ ಅಪವಾದ. ಅವರೀಗ ಲಕ್ಷಾಧೀಶ! ಏಳುವರೆ ಲಕ್ಷ ಸಂಭಾವನೆ ಪಡೆಯುವ ಸಂಭಾವಿತ. ದಿನೇಶ್ ಬಾಬು ಅವರ 'ಮತ್ತೊಂದು ಮದುವೇನಾ' ಚಿತ್ರದಲ್ಲಿ ಅವರು ಸಿಕ್ಕಾಪಟ್ಟೆ ಸಂಭಾವನೆ ಗಿಟ್ಟಿಸಿದ್ದಾರೆ.
ಈ ಚಿತ್ರವನ್ನು ಉಮೇಶ್ ಬಣಕಾರ್ ನಿರ್ಮಿಸುತ್ತಿದ್ದು ಶರಣ್ ಅವರಿಗೆ ಏಳುವರೆ ಲಕ್ಷ ಸಂಭಾವನೆ ಕೊಟ್ಟಿದ್ದಾರೆ. ಆದರೆ ಶರಣ್ ಇಷ್ಟಕ್ಕೆ ತೃಪ್ತಿಯಾಗದೆ ಕೊಂಚ 'ಗಲಾಟೆ' ಮಾಡಿಕೊಂಡಿರುವ ಸುದ್ದಿಯೂ ಇದೆ. ಕೊನೆ ಗಳಿಗೆಯಲ್ಲಿ ಡಬ್ಬಿಂಗ್ಗೆ ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದರು ಎನ್ನಲಾಗಿದೆ.
"ನೀವು ಹೇಳಿದಷ್ಟು ಸಂಭಾವನೆ ಕೊಟ್ಟಿಲ್ಲ. ಹಾಗಾಗಿ ನಾನು ಡಬ್ಬಿಂಗ್ ಮಾಡಲ್ಲ" ಎಂದಿದ್ದರಂತೆ. ಆದರೆ ಅಲ್ಲಿ ನಡೆದದ್ದೇನೆಂದರೆ. ಶರಣ್ ಅವರಿಗೆ ಕೊಟ್ಟ ಸಂಭಾವನೆಯಲ್ಲಿ ಟಿಡಿಎಸ್ ಕಡಿತವಾಗಿದೆ. ಉಳಿದ ಹಣವನ್ನಷ್ಟೆ ಶರಣ್ಗೆ ಬಣಕಾರ್ ಕೊಟ್ಟಿದ್ದರಂತೆ. ಇಷ್ಟಕ್ಕೆ ಶರಣ್ ಟಿಡಿಎಸ್ ಹಣ ಬಂದಿಲ್ಲ ಎಂದು ಗದ್ದಲ ಎಬ್ಬಿಸಿದ್ದಾರೆ.
"ಅದು ಸರಕಾರಕ್ಕೆ ಸಂದಾಯವಾದ ಹಣ. ನಿಮಗೇ ವಾಪಸ್ ಬರುತ್ತದೆ" ಎಂದು ಎಷ್ಟು ಹೇಳಿದರೂ ಶರಣ್ ಕೇಳಲಿಲ್ಲವಂತೆ. ಕೊನೆಗೆ ಉಳಿದ ಹಣ ಕೊಟ್ಟ ಬಳಿಕವಷ್ಟೆ ಶರಣ್ ಡಬ್ಬಿಂಗ್ ಹೇಳಿದ್ದಾರೆ. ಒಟ್ಟಿನಲ್ಲಿ 'ಮತ್ತೊಂದು ಮದುವೇನಾ" ಚಿತ್ರವನ್ನು ಹೇಗೋ ದಿನೇಶ್ ಬಾಬು ಮುಗಿಸಿಕೊಟ್ಟಿದ್ದಾರೆ.
'ಮತ್ತೊಂದು ಮದುವೇನಾ' ಚಿತ್ರದಚಿತ್ರೀಕರಣದಲ್ಲಿ ಶರಣ್ ಏಳು ದಿನ ಪಾಲ್ಗೊಂಡಿದ್ದಾರೆ. ಒಂದು ದಿನಕ್ಕೆ ಅವರು ಒಂದು ಲಕ್ಷ ಸಂಭಾವನೆ ಪಡೆದಿದ್ದಾರೆ. ನಿರ್ದೇಶಕ ದಿನೇಶ್ ಬಾಬು ಈ ಚಿತ್ರವನ್ನು ಒಟ್ಟು ಹದಿನೆಂಟು ದಿನಗಳಲ್ಲಿ ಉಮೇಶ್ ಬಣಕಾರ್ ಅವರಿಗೆ ಮುಗಿಸಿಕೊಟ್ಟಿದ್ದಾರೆ.


Click it and Unblock the Notifications











