ಯೋಗೀಶ್ ನಾಯಕನಾಗಿ ಸೆಟ್ಟೇರಲಿದೆ 'ಅಂಬಾರಿ'
ದುನಿಯಾ ಚಿತ್ರದ ನಿರ್ಮಾಪಕ ಟಿ.ಪಿ.ಸಿದ್ಧರಾಜು ಅವರ ಪುತ್ರ ಯೋಗೀಶ್ ಪಾಸಾಗಿದ್ದಾರೆ. ಯೋಗೀಶ್ ನಟಿಸಿದ 'ನಂದ ಲವ್ಸ್ ನಂದಿತಾ' ಚಿತ್ರ ಬಾಕ್ಸಾಫೀಸಲ್ಲಿ ಗೆದ್ದಿದೆ. ಈಗ ಯೋಗೀಶ್ 'ಅಂಬಾರಿ' ಏರಿದ್ದಾರೆ. 'ಬಂದೇ ಬರ್ತಾಳೆ' ಚಿತ್ರದಲ್ಲಿ ನಟಿಸಿದ್ದ ಸುಪ್ರಿತಾ 'ಅಂಬಾರಿ' ಚಿತ್ರದ ನಾಯಕಿ. ಈ ಚಿತ್ರವನ್ನು ಲಕ್ಷ್ಮಿಕಾಂತ್ ಸಹ ನಿರ್ಮಾಣದೊಂದಿಗೆ ಟಿ.ಪಿ.ಸಿದ್ಧರಾಜು ನಿರ್ಮಿಸುತ್ತಿದ್ದಾರೆ.
ನಂದ ಲವ್ಸ್ ನಂದಿತಾ ಚಿತ್ರದ ವಿಶಿಷ್ಟ ಸಂಭಾಷಣೆಯ ಮೂಲಕ ಯೋಗೀಶ್ ಗಮನ ಸೆಳೆದಿದ್ದಾರೆ. ಯೋಗೀಶ್ ಈಗ ಆಂಗಿಕ ಅಭಿನಯದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗೆಯೇ ಮುಖದ ಹಾವಭಾವಗಳನ್ನು ಪ್ರದರ್ಶಿಸಲು ಕ್ಲೋಸಪ್ ಷಾಟ್ಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ.
ಯೋಗೀಶ್ 'ಅಂಬಾರಿ'ಯಲ್ಲಿ ಕೊಳಗೇರಿಯ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತಾನು ಪ್ರೀತಿಸಿದ ಹುಡುಗಿಗಾಗಿ ಸಾಕಷ್ಟು ಹೊಡೆದಾಟವನ್ನು ಮಾಡಲಿದ್ದಾನಂತೆ. 'ಅಂಬಾರಿ' ಚಿತ್ರದ ಮೂಲಕ ನಿರ್ದೇಶಕನಾಗಿ ಪರಿಚಯವಾಗುತ್ತಿರುವ ಎ.ಪಿ.ಅರ್ಜುನ್ ಈ ಚಿತ್ರವನ್ನು ಹೇಗೆ ತಯಾರಿಸಲಿದ್ದಾರೆ ಎಂಬುದಕ್ಕೆ ಸ್ವಲ್ಪ ದಿನ ಕಾಯಬೇಕಿದೆ. ವಿ.ರವಿಚಂದ್ರನ್ ಹಾಗೂ ಪಿ.ಎನ್.ಸತ್ಯಾ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವಿದೆ.
ಅಂಬಾರಿಯ ಚಿತ್ರೀಕರಣ ಬೆಂಗಳೂರು, ಮಡಿಕೇರಿ, ರಾಜಸ್ತಾನ್ ಮತ್ತು ಕಾಂಡ್ಲದ ಸುಂದರ ಪ್ರದೇಶಗಳಲ್ಲಿ ನಡೆಯಲಿದೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಅಂಬಾರಿ ಚಿತ್ರಕ್ಕಿದೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications