ಸ್ಯಾಂಡಲ್ವುಡ್ನಲ್ಲಿ ರಾಜನೂ ಇಲ್ಲ, ಯುವರಾಜನೂ ಇಲ್ಲ!
ಬೇರೆ ಭಾಷೆಗಳ ಕತೆ ಬೇರೆ...
ಮಿಕ್ಕ ಭಾಷೆಗಳಲ್ಲಿ ಹಳಬರು ಹೀರೋ ಫ್ರೇಮ್ನಲ್ಲಿ ನಿಂದರೂ ಅಲ್ಲಿ ಹೊಸಬರಿಗೆ ಸದಾ ಜಾಗವಾಗುತ್ತಿದೆ. ಹಿಂದಿ, ತಮಿಳು ಇನ್ನಿತರ ಭಾಷೆಗಳಲ್ಲಿ ಹೀರೋವಿನ ತುಂಬು ಕೊರತೆ ಹೆಚ್ಚು ಕಾಣಿಸಲಿಲ್ಲ. ಹಿಂದಿಯಲ್ಲಿ ಚಿಕ್ಕಂದಿನಲ್ಲಿ ರಾಜ್ಕಪೂರ್, ದಿಲೀಪ್ ಕುಮಾರ್, ದೇವಾನಂದ್. ಕಾಲೇಜಿನ ದಿನಗಳಲ್ಲಿ ರಾಜೇಶ್ಖನ್ನಾ ಕ್ರೇಜ್. ಆಮೇಲೆ ಅತ್ಯಂತ ಮೆಚ್ಚಿನ ಅಮಿತಾಭ್, ಇತ್ತೀಚಿನ ದಿನಗಳಲ್ಲಿ ಶಾರೂಖ್ ಹೀಗೇ ನನ್ನ ಮೆಚ್ಚಿನ ಹೀರೋಗಳ ಪಟ್ಟಿಯಲ್ಲಿ ಅಂದಿನವರೂ ಖಾಯಂ ಆಗಿ ನಿಂತರು ಜೊತೆಗೆ ಹೊಸಬರೂ ಸೇರ್ಪಡೆಯಾಗುತ್ತಾ ಹೋದರು.
ತಮಿಳಿನಲ್ಲಿ ನಾನು ಬಹಳವಾಗಿ ಮೆಚ್ಚಿದ್ದು ಶಿವಾಜಿ ಗಣೇಶನ್. ತದನಂತರ ಆ ಸ್ಥಾನ ತುಂಬಿದ್ದು ಕಮಲ್, ಇದೀಗ ಸ್ವಲ್ಪ ಮಟ್ಟಿಗೆ ವಿಕ್ರಮ್. ತೆಲುಗು, ಮಲೆಯಾಳಂ ಮತ್ತಿತರ ಭಾಷೆಗಳಲ್ಲಿ ಹೆಚ್ಚು ಚಿತ್ರಗಳನ್ನು ನೋಡಿಲ್ಲ. ನೋಡಿದ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ನಂತರ ನಾಗಾರ್ಜುನ ಇಷ್ಟವಾದರು. ಮಲೆಯಾಳಂನಲ್ಲಿ ಪ್ರೇಂನಜೀರ್, ಮೊಮ್ಮೊಟ್ಟಿ ನಂತರ ಮೋಹನ್ಲಾಲ್. ಕಾಲ ಮುನ್ನಡೆದಂತೆ ಇತರ ಭಾಷೆಗಳಲ್ಲಿ ‘ಹೀರೋ’ ಫ್ರೇಮ್ನಲ್ಲಿ ಹಿರಿಯರೂ ನಿಂದರು ಕಿರಿಯರೂ ಬಂದರು.
ಆದ್ರೆ ಕನ್ನಡದಲ್ಲಿ ನನಗೆ ಹಾಗೆ ಆಗಲೇ ಇಲ್ಲ. ರಾಜ್ ಅವರ ನಟನೆಯಲ್ಲಿ ಕಂಡ ಪರಿಪೂರ್ಣತೆ, ಅಳವಡಿಗೆ, ತನ್ಮಯತೆ, ಭಾವುಕತೆಗೆ ಇನ್ಯಾರೂ ಸಾಟಿಯಿಲ್ಲ. ಹಾಗೆಂದು ಹಾಗೆಂದು ವಿಷ್ಣು, ಅನಂತ್, ಶಂಕರ್ನಾಗ್, ಲೋಕೇಶ್ ಅವರ ಪ್ರತಿಭೆಯನ್ನು ಅಲ್ಲಗೆಳೆಯುವಂತೆ ಇಲ್ಲ. ಇವರೆಲ್ಲರೂ ಪ್ರತಿಭಾನ್ವಿತರು, ಬಹಳ ಒಳ್ಳೆಯ ಕಲಾವಿದರೂ ಹೌದು. ಆದರೆ ಯಾರೂ ರಾಜ್ ಅವರ ಸ್ಥಾನವನ್ನು ತುಂಬಲಾರದಾದರು.
ರೀಲ್ ಮತ್ತು ರಿಯಲ್ ಹೀರೋ...
ರಾಜ್ರಂತೆಯೇ ಅತ್ಯಂತ ಭಾವಪೂರ್ಣ ಅಭಿನಯ, ಪಾತ್ರದಲ್ಲಿ ಅಳವಡಿಸಿಕೊಂಡು ಅದಕ್ಕೆ ಜೀವ ತುಂಬುವ ಮತ್ತೋರ್ವ ವ್ಯಕ್ತಿ ಅಶ್ವಥ್. ಆದ್ರೆ ಅಶ್ವಥ್ ‘ಹೀರೋ’ ಆಗಿ ಪ್ರೀತಿಸುವ, ಹೃದಯ ತಲ್ಲಣಗೊಳಿಸುವ ವ್ಯಕಿಯಲ್ಲ. ತಂದೆ ಎಂದು ಗೌರವಿಸಿ ನಮಸ್ಕರಿಸುವ ಹಿರಿಯರು ಮಾತ್ರ.
ನಾಲ್ಕು ದಶಕಗಳ ನನ್ನ ಈ ಜೀವಿತಾವಧಿಯಲ್ಲಿ ನಾ ಬೆಳೆದಂತೆ ರಾಜ್ ನನ್ನೊಟ್ಟಿಗೇ ಬೆಳೆದರು ವಿವಿಧ ಭಾವನೆಗಳಲಿ, ರೂಪಗಳಲಿ. ನನ್ನ ಜೀವನದ ಬಾಲ್ಯ, ಯೌವನ, ಮದುವೆ ಹೀಗೆ ನಡೆದಂತೆ ರಾಜ್ಕುಮಾರ್ ಅವರೂ ವಿವಿಧ ಭಾವನೆಗಳಲ್ಲಿ ಅದಕ್ಕೆ ತಕ್ಕ ರೂಪದಲಿ ನನ್ನೊಟ್ಟಿಗೆ ಇದ್ದರು. ಅಂತಹ ಪರಿಪೂರ್ಣತ್ವ ತುಂಬಿತ್ತು ಅವರಲ್ಲಿ.
ಇತ್ತೀಚಿನ ಎರಡು ದಶಕಗಳಿಂದ ರಾಜ್ಕುಮಾರ್ ಅಭಿನಯಿಸುತ್ತಿರಲಿಲ್ಲ ನಿಜ. ವರುಷಕ್ಕೊಮ್ಮೆ ಊರಿಗೆ ಹೋದಾಗ ಗೆಳತಿ/ಗೆಳೆಯರ ಭೇಟಿಯಲ್ಲಿ ರಾಜ್ಕುಮಾರ್ ಹೇಗಿದಾರೆ, ಅವ್ರ ಪಿಕ್ಚರ್ ಏನಾದ್ರೂ ನೋಡಿದ್ರಾ ಎಂಬೊಂದು ಪ್ರಶ್ನೆ ಇದ್ದೇ ಇರುತ್ತಿತ್ತು. ಅವರು ಬದುಕಿಲ್ಲ ಎಂಬ ಕೊರತೆ ಕಾಡಿರಲಿಲ್ಲ. ಮ್ಯಾಗಜೈನ್ಗಳಲ್ಲಿ, ದಿನಪತ್ರಿಕೆಗಳಲ್ಲಿ ಅವರ ಸುದ್ದಿ ಇರುತ್ತಿತ್ತು. ಟಿ.ವಿ.ಯಲ್ಲಿ ಎಂದಾದರೊಮ್ಮೆ ಅವರ ‘ಏಕ್ ಝಲಕ್’ ಕಂಡರೆ ಮನ ನಮ್ಮ ರಾಜ್ಕುಮಾರ್ ಎಂದು ಹೆಮ್ಮೆಯಿಂದ ಬೀಗುತ್ತಿತ್ತು. ಗೌರವಭಾವ ಮೂಡುತ್ತಿತ್ತು. ರಾಜ್ಕುಮಾರ್ ಮತ್ತೆ ನಟಿಸಲಿ ಎಂದು ನನ್ನಂತೆಯೆ ಬಹು ಜನರ ಆಶಯವಾಗಿತ್ತು.
ಇದೀಗ ಹೊಸ ಹೀರೋ ಎಂಬ ಪ್ರಶ್ನೆ ಮೂಡಿದಾಗ ಉತ್ತರ ಶೂನ್ಯ? ಅದೇಕೋ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಅನಾಥ ಎನಿಸಿತು. ರಾಜ್ಕುಮಾರ್ ಅವರಂತಹ ಪರೀಪೂರ್ಣ ನಟನನ್ನು ಮತ್ತೆ ಈ ಜನುಮದಲಿ ಕಾಣಲಾರೆನೇನೋ? ‘ಹೀರೋ’ ಎಂದಾಕ್ಷಣ ರಾಜ್ ಬಿಟ್ಟರೆ ಇನ್ನು ಯಾರು ಆಗಲೇ ಇಲ್ಲ.


Click it and Unblock the Notifications