ಕೂಡಿ ಬಂದ ಕಂಕಣ : ತಾರಾಗೆ ಹಾರ
ತಾರಾ ಸಿಕ್ಕಾಗಲೆಲ್ಲ ಪತ್ರಕರ್ತರದು ಒಂದೇ ಪ್ರಶ್ನೆ, ನಿಮ್ಮ ಮದುವೆ ಯಾವಾಗ?-ಈ ಪ್ರಶ್ನೆಗೆ ಉತ್ತರಿಸಿ ಉತ್ತರಿಸಿ ಸಾಕಾಗಿದ್ದ ತಾರಾ ಕಡೆಗೂ ಹಸೆಮಣೆ ಏರಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿದೆ.
ಎಲ್ಲವೂ ಅಂತುಕೊಂಡಂತೆ ಆದರೆ ಗಟ್ಟಿಮೇಳದ ದನಿ ಫೆಬ್ರವರಿ ಕಡೆಯಲ್ಲಿ ಅಥವಾ ಮಾರ್ಚಿ ಮೊದಲವಾರದಲ್ಲಿ ಮೊಳಗಿದರೆ ಅಚ್ಚರಿಯಿಲ್ಲ. ಕುಮಾರಿ ತಾರಾ ಕಡೆಗೂ ಶ್ರೀಮತಿಯಾಗುತ್ತಿದ್ದಾರೆ. ಅವರ ಕೈ ಹಿಡಿಯುತ್ತಿರುವುದು ಛಾಯಾಗ್ರಾಹಕ ಹೆಚ್.ಸಿ.ವೇಣು.
ಪ್ರೇಮಿಗಳ ದಿನದ ಮುನ್ನಾ ದಿನವಾದ ಫೆ.13ರಂದು ಜೆ.ಪಿ.ನಗರದ ತಾರಾ ಅವರ ನಿವಾಸದಲ್ಲಿಯೇ ಛಾಯಾಗ್ರಾಹಕ ವೇಣುರೊಂದಿಗೆ ಅವರ ನಿಶ್ಚಿತಾರ್ಥ ನಡೆದಿದೆ. ಸಮಾರಂಭ ಅತ್ಯಂತ ಸರಳವಾಗಿತ್ತು ಎನ್ನಲಾಗಿದೆ.
ಮುಂದಿನ ಹದಿನೈದು ದಿನಗಳಲ್ಲಿ ನಮ್ಮಿಬ್ಬರ ವಿವಾಹ ನಡೆಯಲಿದ್ದು, ನಿಶ್ಚಿತಾರ್ಥದ ಸಂಗತಿ ನಿಜವೆಂದು ಛಾಯಾಗ್ರಾಹಕ ವೇಣು ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಪ್ರಸ್ತುತ ಗುಲ್ಪರ್ಗದಲ್ಲಿ ಈ ಭಾವೀ ಜೋಡಿ ‘ಇಶಾ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ. ಈ ಚಿತ್ರದ ನಾಯಕಿ ತಾರಾ ಆಗಿದ್ದು, ಛಾಯಾಗ್ರಾಹಕರಾಗಿ ವೇಣು ಕಾರ್ಯನಿರ್ವಹಿಸುತ್ತಿದ್ದಾರೆ.
ಎಳೆಯ ವಯಸ್ಸಿನಲ್ಲಿಯೇ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ತಾರಾ, ಹಿರಿತೆರೆ ಮತ್ತು ಕಿರುತೆರೆಯಲ್ಲಿ ಪ್ರಬುದ್ಧ ನಟಿಯೆಂದು ಗುರ್ತಿಸಲ್ಪಟ್ಟಿದ್ದಾರೆ. ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ತಾರಾ ಅವರ ಸಾಧನೆಗೆ ಮೈಲಿಗಲ್ಲು.
ತಮ್ಮ ಪಾತ್ರ ಹಾಗೂ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರಿಗೆ ಈಕೆ ಅಚ್ಚುಮೆಚ್ಚು. ಕರ್ನಾಟಕದ ಮನೆಮಗಳಾದ ತಾರಾ ಅವರ ವೈವಾಹಿಕ ಬದುಕು ಸುಖಮಯವಾಗಲಿ ಎಂಬ ಹಾರೈಕೆ ಅವರ ಬೆನ್ನಿಗಿರಲಿ.
(ಏಜನ್ಸೀಸ್)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications