ಸಿಂಗಾಪೂರ್ ಸುತ್ತಿಬಂದ ‘ಪ್ರೀಪ್ರೇಪ್ರ’ ಟೀಂ
*ಶೃಂಗಾರ್
‘ಮನಸೇ ಮನಸೇ ಏನಾಯ್ತು ನಿಂಗೆ ಯಾಕಾಯ್ತು ಹಿಂಗೆ....’
‘ಸೊಂಟದ ಇಸ್ಯ’ ಕುಖ್ಯಾತಿಯ ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ವಿರಚಿತ ಹಾಡಿಗೆ ಮನೋಮೂರ್ತಿ ಖದರ್ ಮಟ್ಟು . ಕುಣಿಯುತ್ತಿದ್ದರು ಸುನಿಲ್ ರಾವ್ ಜೊತೆ ಅನು ಕೃಷ್ಣಕುಮಾರ್ ಮನಸು ಕೊಟ್ಟು. ಕವಿತಾ ಲಂಕೇಶ್ ಹಾಗಲ್ಲ ಹೀಗೆ ಅಂತ ತಿದ್ದುತ್ತಿದ್ದರು. ಹೆಜ್ಜೆ ಹಾಕುವುದನ್ನು ಹೇಳಿಕೊಡಲು ಚಿನ್ನಿ ಪ್ರಕಾಶ್ ಇದ್ದರು. ಕೆಮೆರಾ ಹಿಡಿದು ಮಹೇಂದ್ರನ್ ನಿಂತಿದ್ದರು.
ಹಾಡಿನ ಚಿತ್ರೀಕರಣಕ್ಕೆ ಸಿಂಗಾಪೂರ್ಗೆ ಹೋಗಿಬಂದ ‘ಪ್ರೀತಿ ಪ್ರೇಮ ಪ್ರಣಯ’ ಟೀಮ್ ನೆನಪನ್ನು ಮೆಲುಕು ಹಾಕಿದಾಗ ಕಂಡ ಚಿತ್ರಣವಿದು. ಶಾಂತಿ ಕ್ರಾಂತಿ ಸಿನಿಮಾದಲ್ಲಿ ಪುಟ್ಟ- ಪುಟ್ಟಿಯಾಗಿ ಒಟ್ಟಾಗಿ ಕೆಮೆರಾ ಮುಂದೆ ನಿಂತಿದ್ದ ಜೋಡಿ ಸುನಿಲ್- ಅನು ಈಗ ಬೆಳೆದು ದೊಡ್ಡವರಾಗಿದ್ದಾರೆ. ಅನು ಮುಂದೆ ಈ ಹುಡುಗ ತೀರಾ ಚಿಕ್ಕವನಾಗಿ ಕಾಣಿಸ್ತಾನೆ ಅನ್ನುವ ಕಾಮೆಂಟ್ಗೆ ಕವಿತಾ ಮೊದಲ ದಿನದಿಂದಲೂ ಕ್ಯಾರೇ ಅನ್ನುತ್ತಿಲ್ಲ. ಸಿನಿಮಾ ನೋಡಿ ಮಾತಾಡಿ ಅಂತ ಕಣ್ಣಲ್ಲೇ ಹೇಳುವ ಜಾಯಮಾನದವರು ಅವರು.
ಹಿನ್ನೆಲೆ ಗಾಯಕ ರಾಮ್ ಪ್ರಸಾದ್, ಮಟ್ಟುಗಾರ ಮನೋಮೂರ್ತಿ ಮೊದಲಾದ ಅಮೆರಿಕನ್ನಡಿಗರು ಹಾಕಿರುವ ಹಣವನ್ನು ಪೋಲು ಮಾಡಬಯಸದ ಕವಿತಾ, ಸಿಂಗಾಪೂರ್ನಿಂದ ಮೂರೇ ದಿನಕ್ಕೆ ಪ್ಯಾಕಪ್ ಮಾಡಿಸಿ, ತಂಡವನ್ನು ಬೆಂಗಳೂರಿಗೆ ಕರೆ ತಂದರು.
ಹಿನ್ನೆಲೆ ಸಂಗೀತ ಕೊಡಲು ಮನೋಮೂರ್ತಿ ಅಮೆರಿಕೆಯ ಮನೆಯ ಸ್ಟುಡಿಯೋದಿಂದ ಬೆಂಗಳೂರಿಗೆ ಬರಲೇಬೇಕಾಗಿದೆ. ಸದ್ಯದಲ್ಲೇ ಅವರು ಬೆಂಗಳೂರಿಗೆ ಪಾದ ಬೆಳೆಸುವ ಸುದ್ದಿಯೂ ಇದೆ. ಚುರುಕಾಗಿ ನಡೆಯುತ್ತಿರುವ ಚಿತ್ರೀಕರಣ ‘ಪ್ರೀತಿ ಪ್ರೇಮ ಪ್ರಣಯ’ ಬಲು ಬೇಗ ತೆರೆ ಕಾಣುವ ಮುನ್ಸೂಚನೆಯನ್ನು ಕೊಟ್ಟಿದೆ.
ನಿಮ್ಮ ಗಮನಕ್ಕೆ-
ಪ್ರೀತಿ ಪ್ರೇಮ ಪ್ರಣಯದ ದೊಡ್ಡ ತಾರಾ ಬಳಗ ಇಂತಿದೆ- ಅನಂತನಾಗ್, ಭಾರತಿ, ಪ್ರಕಾಶ್ ರೈ, ಸುಧಾರಾಣಿ, ಭಾವನಾ, ಸುನೀಲ್ ರಾವ್, ಅನು ಪ್ರಭಾಕರ್, ಅರುಣ್ಕುಮಾರ್, ಲೋಕನಾಥ್, ಶಿವರಾಂ ಮೊದಲಾದವರು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications