ಸೋಜಿಗದ ಹೂವೇ ನೋಡೇ... ನಾನು ಹಾಡುವೇನು ಕೇಳೇ!
ಕನ್ನಡದಲ್ಲಿ ನಾಯಕರೆಲ್ಲಾ ಗಾಯಕರಾಗುವುದು ಅತ್ಯಂತ ಹಳೆಯ ಸುದ್ದಿ. ಅಂದಿನ ಹೀರೋಗಳಾದ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ರಿಂದ ಹಿಡಿದು ಇಂದಿನ ಶಿವರಾಜ್ಕುಮಾರ್, ಜಗ್ಗೇಶ್, ಸುದೀಪ್ ಪುನೀತ್ ಮೊದಲಾದವರವರೆಗೂ ಈ ಪಟ್ಟಿ ಬೆಳೆಯುತ್ತದೆ.
ಇವರೆಲ್ಲ ತಮ್ಮ ತಮ್ಮ ಚಿತ್ರಗಳಲ್ಲಿ ಹಾಡಿ ಪ್ರಶಂಸೆಗೂ ಪಾತ್ರರಾದವರು. ಡಾ.ರಾಜ್ಕುಮಾರ್ ಅವರಂತೂ ಅಭಿನಯದಷ್ಟೇ ಖ್ಯಾತಿಯನ್ನು ಗಾಯನದಲ್ಲೂ ಪಡೆದವರು.
ಇದೇ ದಾರಿಯಲ್ಲಿ ಮತ್ತೊಬ್ಬ ನವತಾರೆ ವಿಜಯ ರಾಘವೇಂದ್ರ ಹೆಜ್ಜೆಹಾಕಿದ್ದಾರೆ. 'ಸೇವಂತಿ ಸೇವಂತಿ" ಚಿತ್ರದಲ್ಲಿ ಅವರು 'ಜಾಜಿ ಮಲ್ಲಿಗೆ ನೋಡೇ... ಸೋಜಿಗದ ಹೂವೇ ಕೇಳೇ..." ಎಂಬ ಗೀತೆಯನ್ನು ಹಾಡಿದ್ದಾರೆ. ಇವರ ಹಾಡಿಗೆ ಬಾಲಿವುಡ್ನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಗೂಡಿಸಿದ್ದಾರೆ.
ಅಂದ ಹಾಗೆ ಈ ಚಿತ್ರ ಜಾನಪದ ಸೊಗಡಿನದು. ಚಿತ್ರದಲ್ಲಿನ ಹಾಡುಗಳೆಲ್ಲ ಜಾನಪದ ಗೀತೆಗಳೇ ಆಗಿರುವುದು ಮತ್ತೊಂದು ವಿಶೇಷ.
ವಿಜಯ ರಾಘವೇಂದ್ರ ಬಾಲ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸುವ ಮೊದಲೇ ಸಂಗೀತದ ಓನಾಮ ಕಲಿಯುತ್ತಿದ್ದರು. ಅವರ ದನಿ ಕೂಡ ಚನ್ನಾಗಿದೆ ಎಂದು ಆಗ ಡಾ.ರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖರು ಬೆನ್ನುಚಪ್ಪರಿಸಿದ್ದರು. ತಂದೆ ಚಿನ್ನೇಗೌಡ ತಮ್ಮ ಮಗ ಗಾಯಕನಾಗಬೇಕೆಂದು ಆಸೆಪಟ್ಟವರು. ಇದೀಗ ನಿರ್ದೇಶಕ ಎಸ್.ನಾರಾಯಣ್ ಈ ಆಸೆಯನ್ನು 'ಸೇವಂತಿ ಸೇವಂತಿ" ಚಿತ್ರದಲ್ಲಿ ಈಡೇರಿಸಿದ್ದಾರೆ.


Click it and Unblock the Notifications