ಕೆಚ್ಚೆದೆಯ ಕಲಿ ‘ಸಂಗೊಳ್ಳಿರಾಯಣ್ಣ’ನಾಗಿ ಅರ್ಜುನ್ ಸರ್ಜಾ
ಶಿವರಾಜ್ಕುಮಾರ್ ಅಭಿನಯದ ‘ಗಂಡುಗಲಿ ಕುಮಾರರಾಮ’ ಸೆಟ್ಟೇರುತ್ತಿದ್ದಂತೆ ಐತಿಹಾಸಿಕ ಚಿತ್ರಗಳಿಗೆ ಶುಕ್ರದೆಸೆ ಪ್ರಾರಂಭವಾಗಿದೆ. ಬಿ.ಎಲ್. ವೇಣು ಅವರ ಕಾದಂಬರಿಯಾಧಾರಿತ ‘ಕಲ್ಲರಳಿ ಹೂವಾಗಿ’ ಚಿತ್ರೀಕರಣ ದುರ್ಗದಲ್ಲಿ ಭರದಿಂದ ಸಾಗಿದೆ. ಈಗ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವೀರಮರಣ ಹೊಂದಿದ ವೀರ ‘ಸಂಗೊಳ್ಳಿ ರಾಯಣ್ಣ’ ಚಿತ್ರ ಸಂಚಲನವೆಬ್ಬಿಸಲಿದೆ.
ಸಂಗೊಳ್ಳಿ ರಾಯಣ್ಣ ಪಾತ್ರಕ್ಕೆ ಹೇಳಿ ಮಾಡಿಸಿದಂಥ ಮೈಕಟ್ಟಿರುವ ನಮ್ಮ ಕನ್ನಡಿಗನೇ ಆದ ಅರ್ಜುನ್ ಸರ್ಜಾ ಹೊಸ ಹುಮ್ಮಸ್ಸಿನೊಂದಿಗೆ, ಹೊಸ ನಿರೀಕ್ಷೆಯಾಂದಿಗೆ ತವರಿಗೆ ಮರಳಿದ್ದಾರೆ. ಮರೆಯಲಾಗದ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ನೆಲೆನಿಲ್ಲಲು ಸಂಕಲ್ಪಿಸಿದ್ದಾರೆ. ‘ಸಂಗೊಳ್ಳಿ ರಾಯಣ್ಣ ’ ಚಿತ್ರದಲ್ಲಿ ರಾಯಣ್ಣನ ಪಾತ್ರ ಮಾಡಲು ಅವರು ಸಮ್ಮತಿಸಿದ್ದಾರೆ.
ನಾಗಣ್ಣ ಚಿತ್ರದ ನಿರ್ದೇಶಕರು. ಕ್ರಾಂತಿ ವೀರ ಸಂಗೊಳ್ಳಿರಾಯನ ವ್ಯಕ್ತಿತ್ವ ಕನ್ನಡಿಗರ ಮನದಲ್ಲಿ ನೆಲೆ ನಿಂತಿದೆ. ಅದಕ್ಕೆ ಜೀವ ಕೊಡುವ ಪ್ರಯತ್ನಕ್ಕೆ ನಾಗಣ್ಣ ಮುಂದಾಗಿದ್ದಾರೆ. ‘ಓಳು ಸಾರ್ ಓಳು’ ಎಂಬ ಕಾಮಿಡಿ ಸಿನಿಮಾ, ಬಾಲಾಜಿ ಅಭಿನಯದ ‘ತುಂಟ’ ಚಿತ್ರಗಳ ನಿರ್ಮಾಪಕ ಆನಂದ್, ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸೈಕಲ್ ತುಳಿದು ಸುಸ್ತಾಗಿ ತಮಿಳು ಚಿತ್ರರಂಗಕ್ಕೆ ಜಿಗಿದ ಅರ್ಜುನ್ ಸರ್ಜಾ, ಅಲ್ಲಿನ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚು. ಹಿರಿಯ ನಟ ಶಕ್ತಿಪ್ರಸಾದ್ ಪುತ್ರ, ನಟ ರಾಜೇಶ್ರ ಅಳಿಯ(ರಥಸಪ್ತಮಿ ನಾಯಕಿ ಆಶಾರಾಣಿ ಪತಿ) ಅರ್ಜುನ್ ಸರ್ಜಾ, ದೂರದಲ್ಲಿದ್ದರೂ ಕನ್ನಡ ಪ್ರೀತಿಯನ್ನು ದೂರಮಾಡಿದವರಲ್ಲ. ಈ ಹಿಂದೆ ‘ತುತ್ತಾ ಮುತ’್ತ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಅವರ ಸಹೋದರ ಕಿಶೋರ್ ಸರ್ಜಾ ನಿರ್ದೇಶನದ ಹೊಣೆ ಹೊತ್ತಿದ್ದರು.
ಅರ್ಜುನ್ ಸರ್ಜಾರ ಕಡೆಯ ಕನ್ನಡ ಚಿತ್ರ ‘ಶ್ರೀ ಮಂಜುನಾಥ’.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications