ಚೋರ ಗುರು ಮದಕರಿಗೆ ಸಿಕ್ತು ಗೋದಾಮು
ರಾಜಾಧಿರಾಜರೆಲ್ಲಾ ತಮ್ಮ ರಾಜ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಶೇಖರಿಸಿಡಲು ದೊಡ್ಡ ಉಗ್ರಾಣಗಳನ್ನು ನಿರ್ಮಿಸಿದ್ದನ್ನು ಕೇಳಿ ತಿಳಿದಿದ್ದೇವೆ. ಆದರೆ ಈ ಶತಮಾನದ ಮದಕರಿ ತಾನು ಕದ್ದ ವಸ್ತುಗಳನ್ನು ಸಂಗ್ರಹಿಸಿಡಲು ಒಂದು ಗೋದಾಮು ನಿರ್ಮಿಸಿಕೊಂಡಿದ್ದಾನೆ ನಗರದ ಮೈಸೂರ್ಲ್ಯಾಂಪ್ಸ್ ಆವರಣದಲ್ಲಿ.
ನಾಯಕ ಸುದೀಪ್ ಅಭಿನಯದ ವೀರ ಮದಕರಿ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸುದೀಪ್ ಈ ಚಿತ್ರದಲ್ಲಿ ಕಳ್ಳ ಹಾಗೂ ಪೊಲೀಸ್ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದ್ದಲ್ಲದೆ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಕಳ್ಳನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್ಗೆ ಕಳ್ಳತನಕ್ಕೆ ಸಾಥ್ ನೀಡಲು ಟೆನ್ನಿಸ್ಕೃಷ್ಣ ಇದ್ದಾರೆ. ಕದ್ದ ದಾಸ್ತಾನುಗಳಿಗೆ ಸೂಕ್ತ ನೆಲೆಯಾಗಿ ಮೈಸೂರ್ಲ್ಯಾಂಪ್ಸ್ನ ಆವರಣದಲ್ಲಿ ಕಲಾನಿರ್ದೇಶಕ ಸುರೇಶ್ಮಂಗಳೂರು 20ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಉಗ್ರಾಣದ ಸೆಟ್ ನಿರ್ಮಿಸಿದ್ದಾರೆ. ಕದ್ದು ತಂದ ವಸ್ತುಗಳನ್ನು ನೋಡಿ ಸುದೀಪ್, ಟೆನ್ನಿಸ್ಕೃಷ್ಣ ಸಂತಸ ಪಡುತ್ತಿದ ಸಂದರ್ಭದಲ್ಲಿ ಆ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಧರ್ಮ ಆಗಮಿಸಿ ಸ್ಥಳ ಪರಿಶೀಲನೆ ನಡೆಸುವ ಸನ್ನಿವೇಶವನ್ನು ಈ ಭಾಗದ ಚಿತ್ರೀಕರಣದಲ್ಲಿ ಸೆರೆ ಹಿಡಿಯಲಾಯಿತು.
ದಿನೇಶ್ಗಾಂಧಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ವಿಜೇಂದ್ರ ಪ್ರಸಾದ್ ಕತೆ, ಶ್ರೀವೆಂಕಟ್ ಅವರ ಛಾಯಾಗ್ರಹಣವಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ರಾಗಿಣಿ, ಪವಿತ್ರ, ದಿನೇಶ್ಗಾಂಧಿ, ಗೋಪಿನಾಥ್ಭಟ್, ಮನೋಜ್, ದೊಡ್ಡಣ್ಣ ಟೆನ್ನಿಸ್ಕೃಷ್ಣ ಮುಂತಾದವರಿದ್ದಾರೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications