ಬಳೆ ತೊಡಲು ಕನ್ನಡಕ್ಕೆ ಬರುವರೆ ಪ್ರಿಯಾಮಣಿ?
ದಕ್ಷಿಣ ಭಾರತದಲ್ಲಿ ಕನ್ನಡ ಹೊರತು ಪಡಿಸಿ ಎಲ್ಲ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಪ್ರತಿಭಾವಂತ ನಟಿ ಪ್ರಿಯಾಮಣಿ. ಸೆಂಟಿಮೆಂಟ್ ಕಿಂಗ್ ಅಜಯ್ ಕುಮಾರ್ ಹೆಣೆದಿರುವ 'ಭಾಗ್ಯದ ಬಳೆಗಾರ' ಚಿತ್ರಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಬಳೆಗಾರನಾಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ. 'ನಂದ ನಂದಿತಾ' ಯಶಸ್ವಿ ಚಿತ್ರದ ನಿರ್ಮಾಪಕರು ನಿರ್ಮಿಸಲಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ.
ಪ್ರಿಯಾಮಣಿಗೆ 2007ರ 'ಪರುತ್ತಿ ವೀರನ್' ತಮಿಳು ಚಿತ್ರದ ನಟನೆಗಾಗಿ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಬಂದಿತ್ತು. ಇತ್ತೀಚೆಗೆ ನಡೆದ ದಕ್ಷಿಣ ಭಾರತದ 'ಫಿಲ್ಮ್ ಫೇರ್' ಪ್ರಶಸ್ತಿಯ ಸಂದರ್ಭದಲ್ಲಿ ತಮಿಳು ವಿಭಾಗದಲ್ಲಿ 'ಉತ್ತಮ ನಟಿ' ಪ್ರಶಸ್ತಿ ಗಳಿಸಿದ್ದರು. ಆ ಸಂದರ್ಭದಲ್ಲಿ ಅವರು ''ನಾನು ಮೂಲತಃ ಬೆಂಗಳೂರಿನವಳು ಕನ್ನಡ ಚಿತ್ರಗಳಲ್ಲಿ ನಟಿಸ ಬೇಕೆಂದು ಆಸೆ, ಆದರೆ ಯಾವ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ನನ್ನನ್ನು ಸಂಪರ್ಕಿಸುತ್ತಿಲ್ಲ'' ಎಂದು ತಮ್ಮ ಆಸೆಯನ್ನು ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ದಕ್ಷಿಣ ಭಾರತದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಪ್ರಿಯಾಮಣಿ ಅವರ ಕನ್ನಡದಲ್ಲಿ ನಟಿಸಬೇಕೆಂಬ ಕನಸು ನನಸಗುತ್ತದಾ ಎನ್ನುವುದನ್ನು ಕಾದು ನೋಡಬೇಕು.
ಪ್ರತಿಭಾವಂತ ನಟಿ ಬೆಂಗಳೂರು ಬಾಲೆ ಪ್ರಿಯಾಮಣಿ ಗ್ಯಾಲರಿ


Click it and Unblock the Notifications