ಬಹಿಷ್ಕಾರಕ್ಕೆ ಐ ಡೋಂಟ್ ಕೇರ್ ಎಂದ ರಮ್ಯಾ ಮೇಡಂ
ಚಲನಚಿತ್ರ ವಾಣಿಜ್ಯ ಮಂಡಳಿ ನಟಿ ರಮ್ಯಾಗೆ ಒಂದು ವರ್ಷ ಬಹಿಷ್ಕಾರ ಹಾಕಿರುವ ಬಗ್ಗೆ ಅವರು ಐ ಡೇಂಟ್ ಕೇರ್ ಎಂದಿದ್ದಾರೆ. ನಾನೇ ಚಿತ್ರರಂಗ ಬಿಡ್ತೀನಿ ಎಂದರೆ ಬಹಿಷ್ಕಾರ ಹಾಕಲು ಇವ ರ್ಯಾರು. ಎಂಟು ತಿಂಗಳು ನನ್ನ ದುಡ್ಡು ಕೊಡದೆ ಆಟ ಆಡಿಸಿದ್ದಾರೆ. ನನ್ನನ್ನು ಚಿತ್ರರಂಗದಿಂದ ಬಹಿಷ್ಕಾರ ಹಾಕಿರುವುದು ದೊಡ್ಡ ಜೋಕ್ ಹೊರತು ಮತ್ತಿನ್ನೇನು ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಒಬ್ಬರಿಗೆ ಸಹಾಯ ಮಾಡಲು ಹೋಗಿ ನಾನೇ ಈಗ ಇಕ್ಕಟ್ಟಿನಲ್ಲಿ ಸಿಕ್ಕಿದ್ದೇನೆ. ಇದೆಲ್ಲಾ ನನಗೆ ಬೇಕಿತ್ತಾ? ಗಣೇಶ್ ಅವರಿಗೆ ನಾನು ಸಹಾಯ ಮಾಡಿದ್ದೇ ದೊಡ್ಡ ತಪ್ಪಾಗಿ ಹೋಗಿದೆ. ನಾನು ನನ್ನ ದುಡ್ಡು ವಾಪಸ್ ಕೇಳಿದ್ದಕ್ಕೆ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾರೆ. ಅದೆಲ್ಲಾ ಸರಿ ನನ್ನ ಬಾಕಿ ದುಡ್ಡೆಲ್ಲಿ? ಎಂದು 'ದಂಡಂ ದಶಗುಣಂ' ನಿರ್ಮಾಪಕ ಗಣೇಶ್ ಅವರನ್ನು ಕೇಳಿದ್ದಾರೆ.
ಟ್ವಿಟ್ಟರ್ನಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಗ್ಗೆ ರಮ್ಯಾ ಕೆಟ್ಟದಾಗಿ ಬರೆದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬೇಷರತ್ ಕ್ಷಮೆ ಕೇಳಬೇಕು ಎಂದು ಫಿಲಂ ಚೇಂಬರ್ ಕಟ್ಟಾಜ್ಞೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಅದಕ್ಕೆ ಆಧಾರ ತೋರಿಸಿ. ನಾನು ಟ್ವಿಟ್ಟರ್ನಲ್ಲಿ ಆ ರೀತಿಯ ಯಾವುದೇ ಆಪಾದನೆಯನ್ನೂ ಮಾಡಿಲ್ಲ. ನಾನೇಕೆ ಕ್ಷಮೆ ಕೇಳಲಿ ಎಂದಿದ್ದಾರೆ.
ಅಂಬರೀಷ್, ರಾಕ್ ಲೈನ್ ವೆಂಕಟೇಶ್ ಅಂಕಲ್ ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ. ಒಟ್ಟಾರೆಯಾಗಿ ಈಗ 'ದಂಡಂ ದಶಗುಣಂ' ವಿವಾದ ರೆಬಲ್ ಸ್ಟಾರ್ ಅಂಬರೀಷ್ ಅವರ ಅಂಗಳಕ್ಕೆ ಬಂದಿದೆ. ಅವರ ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ವಿವಾದ ಬಗೆಹರಿಯುತ್ತದೋ ಅಥವಾ ಮತ್ತೊಂದು ತಿರುವು ಪಡೆಯುತ್ತದೋ ಎಂಬುದು ಕಾದುನೋಡಬೇಕು.


Click it and Unblock the Notifications











