ಮಠ ಗುರುಪ್ರಸಾದ್ಗೆ ಇನ್ನೂ ಆ ಫೋಟೋ ಸಿಕ್ಕಿಲ್ಲ
ಅಣ್ಣಾವ್ರ ಈ ಅತ್ಯಮೂಲ್ಯ ಫೋಟೋಗಳೇ ಇಂದು ನಮ್ಮ ಕುಟುಂಬಕ್ಕೆ ಜೀವನಾಧಾರ ಎನ್ನುವ ಬಾಬು ಓದಿದ್ದು ಎಸ್ಸೆಸ್ಸೆಲ್ಸಿ. ಮೂಲತಃ ಬೆಂಗಳೂರಿನವರೇ ಆದ ಇವರು ಕುಟುಂಬಿಕರು ಕಳೆದ ಇಪ್ಪತ್ತು ವರ್ಷಗಳಿಂದಲೂ ಫೋಟೋಗಳಿಗೆ ಫ್ರೇಮ್ ಕಟ್ಟುವ ಕಾಯಕವನ್ನು ಮಾಡುತ್ತಾ ಅದರರಲ್ಲೇ ಒಂದಷ್ಟು ಕಾಸನ್ನೂ ಕಾಣುತ್ತಿದ್ದಾರೆ.
ಬಾಬು ಅವರ ಅಣ್ಣ ಪಿ ಕುಮಾರ್ ಕೂಡ ಅಣ್ಣಾವ್ರ ಸಾಕಷ್ಟು ಫೋಟೋಗಳನ್ನು ಸಂಗ್ರಹಿಸಿದ್ದರು. ಆದರೆ ಅವೆಲ್ಲಾ ಎಲ್ಲೋ ಕಳೆದುಹೋಗಿದ್ದು ನಮ್ಮ ದುರಂತ ಎನ್ನುತ್ತಾರೆ ಬಾಬು. 'ರಾಯರ ಸೊಸೆ' ಚಿತ್ರದಲ್ಲಿನ ಅಣ್ಣಾವ್ರು ಟೈ ಕಟ್ಟಿರುವ ಫೋಟೋ ತಮಗೆ ಅತಿ ಇಷ್ಟ ಎನ್ನುವ ಬಾಬು ಬಳಿ 'ಗೋವಾದಲ್ಲಿ ಸಿಐಡಿ 999' ಚಿತ್ರದ 120 ನೆಗಟೀವ್ಸ್ ಇವೆಯಂತೆ.
ಇದುವರೆಗೂ ಸುಮಾರು 7 ರಿಂದ 8 ಸಾವಿರ ಅಣ್ಣಾವ್ರ ಫೋಟೋಗಳನ್ನು ಮಾರಾಟ ಮಾಡಿದ್ದೇವೆ. ಏಪ್ರಿಲ್ ತಿಂಗಳಲ್ಲಿ ಅತಿಹೆಚ್ಚು ಫೋಟೋಗಳು ಮಾರಾಟವಾಗುತ್ತವೆ. ತಮ್ಮ ಬಳಿ ನೂರರಿಂದ ಹತ್ತು ಸಾವಿರ ರುಪಾಯಿ ಬೆಲೆಬಾಳುವ ಫೋಟೋಗಳು ಇವೆ ಎನ್ನುತ್ತಾರೆ ಬಾಬು.
ಇವರ ಬಳಿ 8x12 ಅಳತೆಯಿಂದ ಹಿಡಿದು 30x40 ಅಳತೆಯ ಚಿತ್ರಗಳು ಲಭ್ಯ. ಇವರ ಫೋಟೋ ಮಳಿಗೆಗೆ ಪುನೀತ್ ರಾಜ್ ಕುಮಾರ್ ಕೂಡ ಭೇಟಿ ನೀಡಿದ್ದಾರೆ. ರಾಜ್ ಕುಟುಂಬದೊಂದಿಗೂ ಬಾಬು ಅವರಿಗೆ ಆತ್ಮೀಯತೆ ಇದೆ. ಪಾರ್ವತಮ್ಮ ಅವರು ಬಾಬುಗೆ ಅಮ್ಮನಷ್ಟೇ ಆಪ್ಯಾಯತೆ ತೋರುತ್ತಾರೆ.
ಮಠ ಖ್ಯಾತಿಯ ಗುರುಪ್ರಸಾದ್ ಕೂಡ ಒಮ್ಮೆ ಇವರ ಮಳಿಗೆಗೆ ಬಂದು 'ಒಂದು ಮುತ್ತಿನ ಕಥೆ' ಚಿತ್ರದಲ್ಲಿ ಅಣ್ಣಾವ್ರಿಗೆ ಶಂಕರ್ ನಾಗ್ ಡೈರೆಕ್ಷನ್ ಮಾಡುತ್ತಿರುವ ಫೋಟೋ ಬೇಕು ಎಂದು ಕೇಳಿದರಂತೆ. ಆ ಫೋಟೋಗಾಗಿ ಅವರು ಇಂದಿಗೂ ಆಗಾಗ ಫೋನ್ ಮಾಡಿ ವಿಚಾರಿಸುತ್ತಲೇ ಇದ್ದಾರಂತೆ. ಇನ್ನೂ ಸಿಕ್ಕಿಲ್ಲ. ನಿಮಗೂ ಅಣ್ಣಾವ್ರ ಫೋಟೋ ಬೇಕೆ. ಬಾಬು ಅವರ ಮೊಬೈಲ್ ಸಂಖ್ಯೆ: 94495 50971.


Click it and Unblock the Notifications











