ಸಿಡಿ ಮುಖಾಂತರಎಲ್ಲಾ ಶಾಲೆಗಳಲ್ಲಿ 'ಸತ್ಯಹರಿಶ್ಚಂದ್ರ'
ಬೆಂಗಳೂರು, ಏ.23: ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ ಏಪ್ರಿಲ್ 24ರಂದು ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕದಾದ್ಯಂತ 'ಸತ್ಯ ಹರಿಶ್ಚಂದ್ರ' ಬಿಡುಗಡೆಯಾಗುತ್ತಿದೆ. ಪ್ರತಿ ಫ್ರೇಂನಲ್ಲೂ ಕಲಾ ಪ್ರೌಢಿಮೆ ತುಂಬಿಕೊಂಡಿದ್ದ ಕಪ್ಪು-ಬಿಳುಪಿನ ಸತ್ಯ ಹರಿಶ್ಚಂದ್ರ ಈಗ ತಾಂತ್ರಿಕ ಶ್ರೀಮಂತಿಕೆಯಿಂದ ಬಣ್ಣ ತುಂಬಿಕೊಂಡು ತೆರೆಕಾಣುತ್ತಿದೆ.
ಬೆಳ್ಳಿತೆರೆಯ ಈ ಅಪೂರ್ವ ದೃಶ್ಯ ಕಾವ್ಯವನ್ನು ಸವಿಯುವ ಸುವರ್ಣ ಅವಕಾಶ ಕರ್ನಾಟಕದ ಸಮಸ್ತ ವಿದ್ಯಾರ್ಥಿಲೋಕಕ್ಕೆ ಸಿಗಲಿದೆ. ನಿರ್ಮಾಪಕರಾದ ಕೆ.ಸಿ.ಎನ್.ಗೌಡ ಅವರು ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಯಾವುದೇ ಲಾಭಾಪೇಕ್ಷೆ ಇಲ್ಲದೆ ಉಚಿತವಾಗಿ ಸತ್ಯ ಹರಿಶ್ಚಂದ್ರ ಚಿತ್ರವನ್ನು ಪ್ರದರ್ಶಿಸಲು ಮುಂದಾಗಿದ್ದಾರೆ(ಸಿಡಿ ಮುಖಾಂತರ). ಇದೊಂದು ನೈತಿಕ ಹಾಗೂ ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿದ್ದಾರೆ ಕೆ.ಸಿ.ಎನ್.ಗೌಡ. ಕಪ್ಪು-ಬಿಳುಪಿನ ಸತ್ಯಹರಿಶ್ಚಂದ್ರ 35 ಎಂಎಂ ವಿನ್ಯಾಸದಲ್ಲಿತ್ತು. ಈಗ ಅದನ್ನು ಬಣ್ಣದ ಸಿನಿಮಾಸ್ಕೋಪ್ನಲ್ಲಿ 16 ಎಂಎಂ ಚಿತ್ರವಾಗಿ ಬದಲಾಯಿಸಿದ್ದಾರೆ. ಸತ್ಯ ಹರಿಶ್ಚಂದ್ರದ ಹಳೆ ಧ್ವನಿ ಹೊಸ ತಂತ್ರಜ್ಞಾನದಲ್ಲಿ ಕೇಳಿಬರಲಿದೆ.
ಬಣ್ಣದ ಆವೃತ್ತ್ತಿಯಲ್ಲಿ ಮೂಡಿಬರುತ್ತಿರುವ ಸತ್ಯ ಹರಿಶ್ಚಂದ್ರ ಮಹಾಭಾರತದ ಪೌರಾಣಿಕ ಕಥೆಯನ್ನು ಆಧರಿಸಿದ್ದು, ಸತ್ಯ, ಸಚ್ಚಾರಿತ್ರ್ಯ, ವೈಯಕ್ತಿಕ ನೀತಿಪಾಠ ದ ಮೌಲ್ಯಗಳು ಹಾಗೂ ರಾಜಕೀಯ ನೀತಿಶಾಸ್ತ್ರವನ್ನು ಇಂದಿನ ಮಕ್ಕಳಿಗೆ ಹೇಳಿ ಕೊಡುತ್ತದೆ. ಸತ್ಯಹರಿಶ್ಚಂದ್ರ ಮಕ್ಕಳ ಮನಸ್ಸನ್ನು ಗೆಲ್ಲುವುದರಲ್ಲಿ ಎರಡು ಮಾತಿಲ್ಲ.
42 ವರ್ಷಗಳಷ್ಟು ಹಳೆಯದಾದ ಸತ್ಯಹರಿಶ್ಚಂದ್ರ ಇಂದಿಗೂ ಪ್ರಸ್ತುತ. ಕಥೆ ಹಳೆಯದಾದರೂ ಪ್ರೇಕ್ಷಕರು ಹೊಸ ದೃಷ್ಟಿಕೋನ ನೋಡುತ್ತಾರೆ. ಆಗಿನ ಕಾಲದಲ್ಲೇ ಚಿತ್ರ ನಿರ್ಮಾಣಕ್ಕೆ 8 ಲಕ್ಷ ರು.ಗಳ ಬಂಡವಾಳ ಹೂಡಿದ್ದರು. ದಕ್ಷಿಣ ಭಾರತದ ಇತರೆ ಕಪ್ಪು-ಬಿಳುಪು ಚಿತ್ರಗಳ ಗಳಿಕೆಯನ್ನು ಮೀರಿ ಆ ಕಾಲದಲ್ಲೇ ಬಾಕ್ಸಾಫೀಸಿನ ಗಳಿಕೆಯಲ್ಲಿ ಮುಂದಿತ್ತು. ಈಗ ಬಣ್ಣದಲ್ಲಿ ಬೆಳ್ಳಿತೆರೆಯನ್ನು ಬೆಳಗಲಿದೆ.
(ದಟ್ಸ್ಕನ್ನಡ ಸಿನಿವಾರ್ತೆ)
ರಾಜ್ ಹುಟ್ಟುಹಬ್ಬದಂದು ಥಿಯೇಟರುಗಳಲ್ಲಿ ಸತ್ಯ ಹರಿಶ್ಚಂದ್ರ


Click it and Unblock the Notifications