ಶಿವರಾಜ್ಗೇಕೆ ಪರಭಾಷಾ ನಾಯಕಿಯರ ಮೋಹ
ಶಿವಣ್ಣನಿಗೆ ಇಲ್ಲಿನ ನಾಯಕಿಯರನ್ನು ತಂಗಿ ಪಾತ್ರಕ್ಕೆ ಒಗ್ಗುವಂತೆ ಮಾಡಿ, ಪರರಾಜ್ಯದವರನ್ನು ನಾಯಕಿ ಸ್ಥಾನಕ್ಕೆ ಏರಿಸುತ್ತಿರುವ ನಿರ್ಮಾಪಕರ ಪರಿಯನ್ನು ಮೆಚ್ಚುವ ಅಭಿಮಾನಕ್ಕೆ ಏನು ಹೇಳೋದು. ಪಾತ್ರಗಳ ಆಯ್ಕೆ ಬರೀ ನಿರ್ಮಾಪಕ, ನಿರ್ದೇಶಕರಿಗೆ ಸೇರಿದ್ದು ಎಂದು ಶಿವಣ್ಣನಂಥ ಸೀನಿಯರ್ ನಟರು ನುಣುಚಿಕೊಳ್ಳೋ ಹಾಗಿಲ್ಲ.
ಶಿವರಾಜ್ ಕುಮಾರ್ ಅವರಿಗೆ ಯಾಕೋ ಇತ್ತೀಚೆಗೆ ಕನ್ನಡದ ನಾಯಕಿಯರ ಮೇಲೆ ಒಲವು ಕಮ್ಮಿಯಾದ್ದಂತಿದೆ. ಸೆಟ್ಟೇರುತ್ತಿರುವ ಹೊಸ ಚಿತ್ರಗಳಿಗೆ ಪರಭಾಷಾ ನಾಯಕಿಯರನ್ನು ಕರೆತರುವ ಪರಿಪಾಠ ಮುಂದುವರೆದಿದೆ. ಸತ್ಯ ಇನ್ ಲವ್ ಚಿತ್ರದಲ್ಲಿ ಜೆನಿಲಿಯಾ ಎಂಬಬೆಡಗಿ ಬಂದ ನಂತರ, ಪರಮೇಶ ಪಾನ್ ವಾಲಾ ಚಿತ್ರಕ್ಕೆ ಸುರ್ವೀನ್ ಚಾವ್ಲಾ ಆಯ್ಕೆಯಾದ ಬೆನ್ನಲ್ಲೇ, 'ನಂದ' ಎಂಬ ಹೊಸ ಚಿತ್ರಕ್ಕೆ ತಮಿಳಿನ ಸುಂದರಿ ಸಂಧ್ಯಾಳನ್ನು ಕರೆತರಲಾಗಿದೆ.
ಚೆಲುವಿನಚಿತ್ತಾರ ಚಿತ್ರದ ಮೂಲ ಪ್ರತಿಯಾದ ತಮಿಳಿನ ಕಾದಲ್ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ತಮಿಳುನಾಡಿನಲ್ಲಿ ಮನೆಮಾತಾದ ನೆರೆಮನೆ ಹುಡುಗಿ ಸಂಧ್ಯಾ, ಈ ಮುಂಚೆ ಪುನೀತ್ ಅವರ ಜತೆ ಮಯೂರ ಚಿತ್ರದಲ್ಲಿ ಅಭಿನಯಿಸಲು ಆಯ್ಕೆಯಾಗಿದ್ದರು. ಆದರೆ ಮಯೂರ ಚಿತ್ರದ ನಿರ್ದೇಶಕ ಶೋಭನ್ ಅವರ ಅಕಾಲಿಕ ಮರಣದಿಂದ ಚಿತ್ರ ನಿಂತು ಹೋಯಿತು. ಈಗ ಶಿವರಾಜ್ ಜತೆ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ.'ನಂದಾ' ಚಿತ್ರನೈಜ ಪ್ರೇಮಕಥಾ ವಸ್ತು ಹೊಂದಿದೆ. ನಿರ್ಮಾಪಕ ಮಾಹಿನ್ ಅವರ ನಿಜ ಜೀವನದ ಕಥೆಯನ್ನು ತೆರೆಗೆ ಅಳವಡಿಸಲಾಗಿದೆ ಎಂಬ ಸುದ್ದಿ ಬಂದಿದೆ.
ನಂದಾ ಚಿತ್ರದಲ್ಲಿ ಐದು ಹಾಡುಗಳಿದ್ದು, ವಿ. ಮನೋಹರ್ ಸೊಗಸಾಗಿ ಸಂಯೋಜನೆ ಮಾಡಿದ್ದಾರೆ.ಗಂಡನ ಮನೆ ಚಿತ್ರದಲ್ಲಿ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜ್ಯೋತಿಕಾ, ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿದ್ದಾರೆ. ಸೆವೆನ್ ಓ ಕ್ಲಾಕ್, ಆಕಾಶಗಂಗೆ ಚಿತ್ರಗಳ ನಾಯಕ ಮಿಥುನ್ ತೇಜಸ್ವಿ ಎರಡನೇ ನಾಯಕನ ಪಾತ್ರ . ಇವರೂ ಕೂಡ ಶಿವಣ್ಣನ ಜತೆ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಈ ಮಧ್ಯೆ ಆಕಾಶ್ ಚಿತ್ರ ನಿರ್ದೇಶಿಸಿದ್ದ ಮಹೇಶ್ ಅವರ ಪರಮೇಶ ಪಾನ್ ವಾಲ ಚಿತ್ರದ ಚಿತ್ರೀಕರಣ ನಗರದ ಉತ್ತರಹಳ್ಳಿಯಲ್ಲಿರುವ ಖಾಸಗಿ ಮನೆಯೊಂದರಲ್ಲಿ ನಾಯಕನನ್ನು ಸುರ್ವಿನ್ ಭೇಟಿ ಮಾಡುವುದರೊಂದಿಗೆ ಸುಸೂತ್ರವಾಗಿ ಆರಂಭವಾಗಿದೆ.
(ದಟ್ಸ್ ಕನ್ನಡಸಿನಿವಾರ್ತೆ)


Click it and Unblock the Notifications