ದಣಿದ ಯೋಗರಾಜ್ ಭಟ್ ಅವರಿಗೆ ಪ್ರಕೃತಿ ಚಿಕಿತ್ಸೆ
ಬೆಂಗಳೂರು, ಜ 23 : ಮುಂಗಾರು ಮಳೆ ಮತ್ತು ಇತ್ತೀಚೆಗೆ ಬಿಡುಗಡೆಯಾದ ಗಾಳಿಪಟ ಚಿತ್ರಖ್ಯಾತಿಯ ನಿರ್ದೇಶಕ ಯೋಗರಾಜ್ ಭಟ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಚಿಕಿತ್ಸೆ ಮತ್ತು ವಿಶ್ರಾಂತಿಯನ್ನು ಏಕಕಾಲಕ್ಕೆ ಪಡೆಯುವ ಸಲುವಾಗಿ ಅವರು ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ಬುಧವಾರ ಬೆಳಗ್ಗೆ ದಾಖಲಾದರು.
ಕಳೆದ ಎರಡು ವರ್ಷಗಳಿಂದ ಸತತವಾಗಿ ಸಿನಿಮಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಭಟ್ ಸಹಜವಾಗಿಯೇ ದಣಿದಿದ್ದಾರೆ. ವಿಶ್ರಾಂತಿಯನ್ನು ಲೆಕ್ಕಿಸದೆ ಹಗಲೂ ಮೂರೂ ಹೊತ್ತು ಕೆಲಸ ಮತ್ತು ಚಿತ್ರಕರ್ಮಿಯಾಗಿ ಆಲೋಚನೆಗಳಲ್ಲಿ ಮುಳುಗಿದ್ದರಿಂದ ಅವರಿಗೆ ಆಯಾಸವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕತ್ತಿನಲ್ಲಿ ಉಳುಕು ಮತ್ತು ಮಂಡಿನೋವಿನಿಂದ ಬಳಲುತ್ತಿರುವ ಅವರಿಗೆ ಸೂಕ್ತ ಆರೈಕೆ ಮತ್ತು ಉಪಚಾರದ ಅಗತ್ಯವಿದೆ. ಆದ್ದರಿಂದ ಪ್ರಕೃತಿ ಚಿಕಿತ್ಸೆಯನ್ನು ಅರಸಿ ಧರ್ಮಸ್ಥಳಕ್ಕೆ ಬಂದೆವು ಎಂದು ಅವರ ಕುಟುಂಬದ ಸದಸ್ಯರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಭಟ್ ಅವರು ಸುಮಾರು ಹತ್ತುದಿವಸಗಳ ಪ್ರಕೃತಿ ಚಿಕಿತ್ಸೆ ಪಡೆಯುವವರಿದ್ದಾರೆ.
( ದಟ್ಸ್ ಸಿನಿ ವಾರ್ತೆ)
ಯೋಗರಾಜ್ ಭಟ್ ಶೀಘ್ರವಾಗಿ ಗುಣಮುಖರಾಗಲೆಂದು ಶುಭ ಹಾರೈಸಿ .


Click it and Unblock the Notifications