ನಟಿ ಗಜಲ ಆತ್ಮಹತ್ಯೆ ಪ್ರಯತ್ನ ; ಹೈದರಾಬಾದ್ನಲ್ಲಿ ಸಂಚಲನೆ
ಪ್ರತ್ಯೂಷ ಆತ್ಮಹತ್ಯೆಯ ಸುಳಿಗಾಳಿ ತೆಲುಗು ಚಿತ್ರರಂಗದಲ್ಲಿ ಎಬ್ಬಿಸಿರುವ ಅಲೆಗಳು ಶಾಂತವಾಗುವ ಮುನ್ನವೇ ಮತ್ತೊಬ್ಬ ನಟಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್ನಲ್ಲಿ ಸಂಚಲನೆ ಉಂಟು ಮಾಡಿದೆ.
ಜೂನಿಯರ್ ಎನ್ಟಿ ರಾಮರಾವ್ಗೆ 'ಅಲ್ಲರಿ ರಾಮುಡು" ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತೆಲುಗು ಚಿತ್ರ ರಸಿಕರ ಮನ ಗೆದ್ದಿದ್ದ ಮುಂಬಯಿ ಮೂಲದ ನಾಯಕಿ ಗಜಲ ಆತ್ಮಹತ್ಯೆಗೆ ಪ್ರಯತ್ನಿಸುವುದರ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾಳೆ. ಭಾನುವಾರ (ಜು.21) ರಾತ್ರಿ ಅಧಿಕ ಪ್ರಮಾಣದಲ್ಲಿ ನಿದ್ದೆ ಗುಳಿಗೆಗಳನ್ನು ಸೇವಿಸಿ ಸಾವಿನ ಸುಳಿಗೆ ಸಿಲುಕಿದ್ದ ಗಜಲ ಈಗ ಅಪಾಯದಿಂದ ಪಾರು.
ಹೈದರಾಬಾದ್ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಸ್ವಸ್ಥಗೊಂಡಿದ್ದ ಗಜಲಳಿಗೆ ಚಿಕಿತ್ಸೆ ನೀಡಿದ್ದು , ಸೋಮವಾರ ಆಸ್ಪತ್ರೆಯಿಂದ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಗಜಲ ಅಪಾಯದಿಂದ ಸಂಪೂರ್ಣ ಪಾರಾಗಿದ್ದಾರೆ ಎಂದು ಆಕೆಗೆ ಶುಶ್ರೂಷೆ ನೀಡಿದ ವೈದ್ಯರು ಘೋಷಿಸಿದ್ದಾರೆ.
ಗಜಲ ಅಧಿಕ ಪ್ರಮಾಣದ ನಿದ್ದೆ ಗುಳಿಗೆಗಳನ್ನು ತೆಗೆದುಕೊಳ್ಳಲು ಕಾರಣವೇನು ಅನ್ನುವುದು ಗೊತ್ತಾಗಿಲ್ಲ . ಆದರೆ, ಕೆಲವು ತಿಂಗಳ ಹಿಂದಷ್ಟೇ ನಟಿ ಪ್ರತ್ಯೂಷಳ ಆತ್ಮಹತ್ಯೆಯಿಂದ ತಲ್ಲಣಗೊಂಡಿದ್ದ ತೆಲುಗು ಚಿತ್ರರಂಗ- ಗಜಲಳ ಆತ್ಮಹತ್ಯಾ ಪ್ರಕರಣದಿಂದ ತಲ್ಲಣಿಸಿದೆ.
ಬಣ್ಣದ ಬದುಕಿನ ತಲ್ಲಣಗಳು ಎಷ್ಟು ಬಗೆಯೋ! ಪೂರಕ ಓದಿಗೆ-


Click it and Unblock the Notifications