ಗಗನವು ಎಲ್ಲೋ ಭೂಮಿಯು ಎಲ್ಲೋಒಂದೂ ಅರಿಯೇ ನಾ
ಎರಡು ದಶಕಗಳ ಹಿಂದಿನ ಮಾತು. ಅದು ಕನ್ನಡ ಚಿತ್ರರಂಗದ ಚಿನ್ನದ ಹಬ್ಬದ ಸಂದರ್ಭ. ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮವಿತ್ತು. ಸಮಾರಂಭದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಏರ್ಪಾಟಾಗಿತ್ತು. ಯಾಕೋ ಏನೋ, ನಿಗದಿತ ವೇಳೆಗೆ ಕಾರ್ಯಕ್ರಮ ಶುರುವಾಗಲೇ ಇಲ್ಲ.
ಅದು ಡಿಸೆಂಬರಿನ ಕೊರೆವ ಚಳಿ. ಉಳಿದೆಲ್ಲ ಕೆಲಸ ಮರೆತು ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಮಂದಿ ಎಂಥದೋ ಅಸಹನೆಯಿಂದ ಚಡಪಡಿಸುತ್ತಿದ ್ದರು. ಈ ಚಡಪಡಿಕೆಯಲ್ಲೇ ಹುಡುಗರೆಲ್ಲಾ ತಮ್ಮ ಎರಡೂ ಕೈಗಳನ್ನು ಪ್ಯಾಂಟ್ ಜೇಬಿನಲ್ಲಿ ಇಳಿಬಿಟ್ಟು ಹಲ್ಲು ಕಡಿಯುತ್ತಾ ಸ್ಟೇಡಿಯಂನಿಂದ ಹೊರಡಲು ತುದಿಗಾಲ ಮೇಲೆ ನಿಂತಿದ್ದರೆ, ಹೆಂಗಸರು ಎರಡೂ ಅಂಗೈಗಳನ್ನು ಉಜ್ಜುತ್ತ ಹೋಗುವುದೋ ಬೇಡವೋ ಎಂಬ ಚಿಂತೆಯಲ್ಲೇ ಕುಳಿತ ಜಾಗದಿಂದ ಕದಲಲಾರಂಭಿಸಿದರು. ಜನ ಎದ್ದು ಹೋಗುವುದನ್ನು ಗಮನಿಸಿದ ಸಂಘಟಕರು ಎಚ್ಚರಗೊಂಡದ್ದೇ ತಡ- ಈ ಹಾಡು ಕೇಳಿಬಂತು...
'ಗಗನವು ಎಲ್ಲೋ ಭೂಮಿಯು ಎಲ್ಲೋ
ಒಂದೂ ಅರಿಯೇ ನಾ...'
ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ತಮ್ಮ ಸಿರಿಕಂಠದಲ್ಲಿ ಹಾಡು ಆರಂಭಿಸಿದ್ದೇ ತಡ, ಮಿಂಚಿನ ಸಂಚಾರವಾಯ್ತು . ಹೊರಡಲು ಎದ್ದಿದ್ದವರು ಹಾಗೇ ಕೂತರು. ನಡೆಯುತ್ತಿದ್ದವರು ಹಾಗೇ ನಿಂತರು. ಕಡ್ಲೆಕಾಯಿ ಬಿಡಿಸಿದವರು ಸಿಪ್ಪೆ ಕೆಳಗೆ, ಕಾಳು ಬಾಯಾಳಗೆ ಹಾಕಿಕೊಳ್ಳುವುದನ್ನೇ ಮರೆತರು!
ಜಾನಕಿ ತಮ್ಮ ಮಧುರ ಕಂಠದಲ್ಲಿ ಭಾವ ಪರವಶರಾಗಿ, ತನ್ಮಯತೆಯಿಂದ, ಕೊರೆಯುತ್ತಿದ್ದ ಚಳಿಯನ್ನೂ ಲೆಕ್ಕಿಸದೆ ಹಾಡಿದರು-
'ನನಗೆ ನೀ ನೀಡಿದ ವಚನವ
ಕೇಳಿ ತೇಲಿ ತೇಲಿ ಹೋದೆ ನಾ..'
ಗೆಜ್ಜೆಪೂಜೆ ಚಿತ್ರದಲ್ಲಿ ನಟಿ ಕಲ್ಪನಾ ಹರ್ಷದಿಂದ ಹುಚ್ಚೆದ್ದು ಕುಣಿವ ದೃಶ್ಯ ಎಲ್ಲರ ಕಣ್ಮುಂದೆ ಬಂದು ನಿಂತಿತು. ಸ್ಟೇಡಿಯಂಗೆ ಬಂದಿದ್ದವರೆಲ್ಲ ಸಂತೋಷದಿಂದ ಕುಣಿದಾಡುವಂತಾಯ್ತು.
***
ಈಗಲೂ ಅದನ್ನು ನೆನಪು ಮಾಡಿಕೊಂಡರೆ ಮೈ ಜುಂ ಅನ್ನಿಸುತ್ತದೆ. ವಿನಾಕಾರಣ ಸಂತೋಷವಾಗುತ್ತದೆ.
'ಗಗನವು ಎಲ್ಲೋ ಭೂಮಿಯು ಎಲ್ಲೋ
ಒಂದೂ ಅರಿಯೇ ನಾ...'
ಈ ಸಾಲೇ ಒಂದು ಸಂಭ್ರಮದ ಸ್ಥಿತಿ ತಿಳಿಸುತ್ತೆ . ಅದು ಜಗವ ಗೆದ್ದ ಸಂತೋಷ. ಅಸಾಧ್ಯವಾದುದನ್ನು ಸಾಧಿಸಿದಾಗ ಸಿಗುವ ಖುಷಿ. ಗೌರಿಶಂಕರದ ತುತ್ತ ತುದಿಯಲ್ಲಿ ನಿಂತಾಗ ಆಗುವ 'ಅನುಭವ'ದ ಆನಂದ.
***
ಆಕಸ್ಮಿಕವಾಗಿ 'ಸೊಂಟದ ವಿಷ್ಯ ಬೇಡ್ವೊ ಶಿಷ್ಯಾ..' ಎಂಬ ಅಸಂಬದ್ಧ ಹಾಡು ಕೇಳಿದ್ದೇ ತಡ, ಈ ಅಪರೂಪದ ಹಾಡು, ಅಷ್ಟೇ ಅಪರೂಪದ ಪ್ರಸಂಗ ನೆನಪಾಯಿತು.


Click it and Unblock the Notifications