ಅಂದಾಜಿಗೇ ಸಿಕ್ಕದ ರಜನಿಕಾಂತ್ ರಂಗು !
ಸದ್ಯಕ್ಕಂತೂ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಹೇಳುವುದರ ಮೂಲಕ ರಜನಿಕಾಂತ್ ತಮ್ಮ ವಿರೋಧಿ ಪಾಳಯಗಳಿಗೆ ಹೊಸ ವರಸೆ ತೋರಿದ್ದಾರೆ.
ಅಷ್ಟೇ ಅಲ್ಲ, ದೇಶದ ಉತ್ತರ ದಿಕ್ಕಿನ ನದಿಗಳನ್ನು ದಕ್ಷಿಣ ರಾಜ್ಯಗಳ ನದಿಗಳೊಟ್ಟಿಗೆ ಬೆಸೆಯುವ ನಿಟ್ಟಿನಲ್ಲಿ ಅವರು ಹುಟ್ಟು ಹಾಕಿದ ಜನ ಚಳವಳಿಯನ್ನೂ ರಜನಿ ಹಿಂದಕ್ಕೆ ಪಡೆದಿದ್ದಾರೆ.
ನದಿಗಳನ್ನು ಬೆಸೆಯುವ ಕೆಲಸವನ್ನು ಆಸ್ಥೆ ವಹಿಸಿ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಹೇಳಿದೆ. ಸರ್ಕಾರ ಕೂಡ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಹೀಗಿರುವಾಗ ಸರ್ಕಾರವನ್ನು ಎಚ್ಚರಿಸುವ ಅಗತ್ಯವೇ ಇಲ್ಲ. ಇದಕ್ಕಾಗಿ ಜನ ಚಳವಳಿ ನಡೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಚಳವಳಿಯನ್ನು ನಾನು ವಾಪಸ್ಸು ಪಡೆದಿದ್ದೇನೆ ಎಂದು ಭಾನುವಾರ ಘಂಟಾಘೋಷವಾಗಿ ಹೇಳಿದರು.
ಅವರು ಹೀಗೆ ಹೇಳಲು ಕಾರಣವೂ ಇತ್ತು. ತಮ್ಮ ಗುರು ಸ್ವಾಮಿ ಸಚ್ಚಿದಾನಂದರ 88ನೇ ವಾರ್ಷಿಕ ಸ್ಮರಣಾ ಸಮಾರಂಭಕ್ಕಾಗಿ ಕೊಯಮತ್ತೂರಿಗೆ ರಜನಿ ಬಂದಾಗ ಎಲ್ಲೆಲ್ಲೂ ಜನ ಹಾಗೂ ಜಲ ಚಳವಳಿ ಕುರಿತ ಬ್ಯಾನರ್ರು, ಪೋಸ್ಟರ್ರುಗಳು. ರಜನಿ ಕಣ್ಣಿಗೆ ಇವು ಚುಚ್ಚಿದ್ದೇ ತಡ, ಅವರು ಚಳವಳಿಯೂ ಇಲ್ಲ, ಎಂಥದ್ದೂ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದರು.
ಹೀಗೆ ಬ್ಯಾನರ್ರು, ಪೋಸ್ಟರುಗಳು ಕಾಣಿಸಿಕೊಂಡ ತಕ್ಷಣವೇ ಅಲ್ಯಾರೋ ರಜನಿ ರಾಜಕೀಯ ಪ್ರವೇಶ ಆಗೇ ಹೋಯಿತು ಎಂಬಂತೆ ಮಾತಾಡುತ್ತಿದ್ದರು. ಜನ ಚಳವಳಿ ಮುಂದಿಟ್ಟುಕೊಂಡು ರಜನಿ ಬೀದಿಗಿಳಿದಾಗಲೂ, ಇದು ರಾಜಕೀಯ ವರಸೆ ಎಂದು ಬಣ್ಣಿಸಲು ಅನೇಕರು ಶುರುವಿಟ್ಟರು. ರಜನಿಗೆ ಪ್ರತಿಯಾಗಿ ಕಮಲ ಹಾಸನ್ ಕೂಡ ರಾಜಕೀಯ ಅಖಾಡಕ್ಕೆ ಇಳಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಗುಲ್ಲೆದ್ದಿತು. ಆದರೆ ರಜನಿ ನಿರೀಕ್ಷೆಗಳ ಮೇಲೆ ಗೆರೆ ಎಳೆದಿದ್ದಾರೆ.
ಕಳೆದ ವಾರವಷ್ಟೆ ನಡೆದ ಅವರ ಹುಟ್ಟುಹಬ್ಬ ಕೂಡ ತಣ್ಣಗಿತ್ತು. ಕೆಲವೇ ತಿಂಗಳ ಹಿಂದೆ ನದಿಗಳನ್ನು ಜೋಡಿಸುವ ಕಾಯಕಕ್ಕೆ ತಾವು 1 ಕೋಟಿ ರುಪಾಯಿ ಕೊಡಲು ಸಿದ್ಧ ಎಂದು ಜನಾಂದೋಲನ ಶುರು ಮಾಡಿದ ರಜನಿ, ಈಗ ಈ ಚಳವಳಿಗೂ ಪೂರ್ಣವಿರಾಮ ಹಾಕಿದ್ದಾರೆ. ಹಾಗಾದರೆ, ರಜನಿ ರಾಜಕೀಯಕ್ಕೆ ಬರೋದಿಲ್ಲವಾ?ಸದ್ಯಕ್ಕಂತೂ ಇಲ್ಲ ಅಂತ ರಜನಿ ನಗುತ್ತಾರೆ. ಅಂದರೆ, ರಾಜಕೀಯಕ್ಕೆ ಬರೋದೇ ಇಲ್ಲ ಅಂತ ಅವರು ಹೇಳೋದಿಲ್ಲ. ರಜನಿ ವರಸೆಗಳು ಪ್ರತಿ ಪಾಳಯದವರ ಲೆಕ್ಕಕ್ಕಂತೂ ಸದ್ಯಕ್ಕೆ ಸಿಕ್ಕುತ್ತಿಲ್ಲ !


Click it and Unblock the Notifications