ಅಪ್ಪಾಜಿ ಆಶಯದ ವಿರುದ್ಧ ಹೋದರೆ ಸುಮ್ಮನಿರಲ್ಲ

ಹೀಗೆಂದು ನಟ ಶಿವರಾಜ್ ಕುಮಾರ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಅಣ್ಣಾವ್ರ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ನೆರೆದಿದ್ದ ಅಸಂಖ್ಯಾತ ಅಭಿಮಾನಿಗಳ ಮುಂದೆ ಹೀಗೆ ಗುಡುಗಿರುವ ಶಿವಣ್ಣರ ಮಾತಿನ ಹಿಂದಿರುವ ವಿಷಯ ಡಬ್ಬಿಂಗ್ ವಿರೋಧ. ಇದಕ್ಕೆ ಕಾರಣ, ಬಾಲಿವುಡ್ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಅಮೀರ್ ಖಾನ್ ನಡೆಸಲಿರುವ ಸತ್ಯಮೇವ ಜಯತೇ' ಎಂಬ ಕಿರುತೆರೆ ಕಾರ್ಯಕ್ರಮ.
ಇದೇ ಪ್ರಪ್ರಥಮ ಬಾರಿಗೆ ಕಿರುತೆರೆಗೆ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದಾರೆ ಬಾಲಿವುಡ್ ನಟ ಅಮೀರ್ ಖಾನ್. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಅಮೀರ್ ನಡೆಸಿಕೊಡುವ 'ಸತ್ಯಮೇವ ಜಯತೆ' ಕಾರ್ಯಕ್ರಮ ಮೇ 6ರಿಂದ ಆರಂಭವಾಗಲಿದೆ. ಈ ಕಾರ್ಯಕ್ರಮ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಹೀಗೆ ಭಾರತದ ನಾಲ್ಕು ಭಾಷೆಗಳಲ್ಲಿ ಪ್ರಸಾರವಾಗಲಿದೆ. ಕನ್ನಡಿಗರು ಸಹಕರಿಸಿದರೆ ಕನ್ನಡಕ್ಕೂ ಡಬ್ ಮಾಡಲು ಅಮೀರ್ ಉದ್ದೇಶಿಸಿದ್ದರು. ಆದರೆ ಇಲ್ಲಿ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಆ ಕಾರ್ಯಕ್ರಮ ಕನ್ನಡಕ್ಕೂ ಡಬ್ ಆಗುವಂತೆ ಕನ್ನಡದ ಚಿತ್ರೋದ್ಯಮದಲ್ಲಿ ತೆರೆಮರೆಯಲ್ಲಿ ಚಟುವಟಿಕೆ ಆರಂಭವಾಗಿದೆ. ಈಗಾಗಲೇ ಹಿಂಬಾಗಿಲಿನಿಂದ ಪ್ರವೇಶ ಪಡೆಯಲು ಪ್ರಯತ್ನ ನಡೆಯುತ್ತಿವೆ ಎಂಬ ವರದಿ ಎಲ್ಲೆಡೆ ಓಡಾಡುತ್ತಿದೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಶಿವಣ್ಣ, "ಅಪ್ಪಾಜಿ ಡಬ್ಬಿಂಗ್ ವಿರೋಧಿಯಾಗಿದ್ದರು. ಅವರ ಆಶಯಕ್ಕೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ ಸುಮ್ಮನಿರುವುದಿಲ್ಲ" ಎಂದು ಸಿಂಹದ ಮರಿಯಂತೆ ಆರ್ಭಟಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











