ರಮ್ಯಾ ವಿವಾದಕ್ಕೆ ಡಾ.ರಾಜ್ ಕುಟುಂಬದ ಉತ್ತರವೇನು!?
ರಮ್ಯಾ ವಿವಾದ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಕನ್ನಡ ಚಿತ್ರರಂಗ ಇಬ್ಭಾಗವಾಗುವ ಹಂತಕ್ಕೆ ಬಂದು ನಿಂತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಡಾ.ರಾಜ್ ಕುಟುಂಬ ಯಾಕೆ ಮೌನಕ್ಕೆ ಶರಣಾಗಿದೆ? ಇಷ್ಟಕ್ಕೂ ಶ್ರೀಮತಿ ಪಾರ್ವತಮ್ಮ ಅವರು ನಿರ್ಮಾಪಕರ ಪರವೋ ಅಥವಾ ಕಲಾವಿದರ ಪರವೋ? ಎಂಬ ಕ್ಷುಲ್ಲಕ ಪ್ರಶ್ನೆಗಳನ್ನು ಕೇಳುತ್ತಿರುವವರಿಗೆ ರಾಘವೇಂದ್ರ ರಾಜ್ ಕುಮಾರ್ ಉತ್ತರ ನೀಡಿದ್ದಾರೆ.
ದಂಡಂ ದಶಗುಣಂ ನಿರ್ಮಾಪಕ ಎ ಗಣೇಶ್ ಹಾಗೂ ರಮ್ಯಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ, ನಟ ರಾಘವೇಂದ್ರ ರಾಜ್ ಕುಮಾರ್, ಇದುವರೆಗೂ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದ್ದರೆ ಎಲ್ಲರೂ ಕೂತು ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಈಗಲೂ ಕೈಮೀರಿಲ್ಲ ಬನ್ನಿ ಕೂತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸೋಣ ಎಂದಿದ್ದಾರೆ.
ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದಂತೆ. ಯಾವುದೇ ಕಲಾವಿದರನ್ನಾಗಲಿ ಅಥವಾ ನಿರ್ಮಾಪಕರನ್ನಾಗಲಿ ಚಿತ್ರರಂಗದಿಂದ ಬಹಿಷ್ಕರಿಸುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ ರಾಘವೇಂದ್ರ ರಾಜ್ ಕುಮಾರ್. ಆದರೆ ಪಾರ್ವತಮ್ಮ ರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎನ್ನುತ್ತವೆ ಮೂಲಗಳು.


Click it and Unblock the Notifications











