ಅನ್ನದ ಮೇಲೆ ಅಪಾರ ಗೌರವ ಹೊಂದಿದ್ದ ಡಾ ರಾಜ್
ಇಂದು (24 ಏಪ್ರಿಲ್ 2012) ಕನ್ನಡದ ಮೇರು ನಟ, ಅಣ್ಣಾವ್ರು ಡಾ ರಾಜ್ ಕುಮಾರ್ ಹುಟ್ಟುಹಬ್ಬ. ಅದನ್ನು ಯಾರಿಗೂ ನೆನಪಿಸುವ ಅಗತ್ಯವೇ ಇಲ್ಲದಷ್ಟು ಜನಪ್ರಿಯವಾಗಿದೆ ಈ ದಿನ. ಡಾ ರಾಜ್ ಹುಟ್ಟುಹಬ್ಬವನ್ನು ನಾಡಹಬ್ಬದಂತೆ ನಾಡಿನ ತುಂಬೆಲ್ಲ ಆಚರಿಸಲಾಗುತ್ತಿದೆ. ಅವರ ಮೇರು ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರು ಮಾದರಿ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಘಟನೆಗಳು ಜನಜನಿತವಾಗಿವೆ.
ಅದರಲ್ಲೊಂದು ಡಾ ರಾಜ್ ಅವರಿಗೆ ಅನ್ನದ ಮೇಲಿದ್ದ ಅಪಾರ ಗೌರವ. ಅದಕ್ಕೊಂದು ಉದಾಹರಣೆ ಇಲ್ಲಿದೆ...ಒಮ್ಮೆ ಡಾ ರಾಜ್, ಮಕ್ಕಳಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಹಾಗೂ ಇತರ ಕೆಲವರ ಜೊತೆ ಅಮೇರಿಕಕ್ಕೆ ಹೋಗಿದ್ದರು. ಮೊದಲ ಐದಾರು ದಿನ ಅವರಿಗೆ ಅನ್ನ ಸಿಕ್ಕಲಿಲ್ಲ. ಕೊನೆಗೊಂದು ದಿನ ಅನ್ನ ಸಿಗುತ್ತದೆ ಎಂದು ತಿಳಿದಾಗ ಐದಾರು ಪ್ಲೇಟ್ ಹೆಚ್ಚಿಗೆ ಹೇಳಿದ್ದರು.

ತಂದ ಮೇಲೆ ನೊಡಿದರೆ ಅನ್ನ ಹಳಸಿದೆ, ತಿನ್ನುವುದಿರಲಿ, ಬಾಯಿ ಹತ್ತಿರಕ್ಕೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದಷ್ಟು ಹಳಸಿದೆ. ಶಿವಣ್ಣ, ರಾಘಣ್ಣ ಅದನ್ನು ಮುಟ್ಟಲಿಲ್ಲ. ಆದರೆ ರಾಜ್ ಎಲ್ಲರನ್ನೂ ಒಮ್ಮೆ ನೋಡಿ ಐದಾರು ಪ್ಲೇಟ್ ಅನ್ನವನ್ನು ತಿಂದರು. ಮುಖದಲ್ಲಿ ಯಾವ ಕೆಡುಕಿನ ಭಾವವನ್ನೂ ತಾಳದೇ ಅನ್ನಕ್ಕೆ ಬೆಲೆ ಕೊಡುವ ರೀತಿಯಲ್ಲಿ ಅದನ್ನು ತಿಂದು ಮಂದಹಾಸ ಬೀರಿದರು.
ಅವರಿಗಿದ್ದ ಅನ್ನದ ಮೇಲಿನ ಗೌರವಕ್ಕೆ ಇದೊಂದು ದೃಷ್ಟಾಂತ ಅಷ್ಟೇ. ಯಾವತ್ತೂ ಅನ್ನಕ್ಕೆ ಬೆಲೆಕೊಟ್ಟವರು ಅಣ್ಣಾವ್ರು. ಅದನ್ನು ಪ್ರಚಾರಕ್ಕಾಗಲೀ ದೊಡ್ಡಸ್ತಿಕೆ ತೋರಿಸಿಕೊಳ್ಳಲಿಕ್ಕಾಗಲೀ ಎಂದೂ ಮಾಡಿದವರಲ್ಲ. ಅಷ್ಟು ದೊಡ್ಡ ಮನಸ್ಸು ಇದ್ದುದರಿಂದಲೇ ಇಷ್ಟು ಎತ್ತರಕ್ಕೆ ಬೆಳೆದವರು ಡಾ ರಾಜ್ ಕುಮಾರ್.


Click it and Unblock the Notifications











