ಗೋಡೆ ಬಿಟ್ಟು ತೆರೆ ಅಲಂಕರಿಸಲಿದೆ ಸ್ವಯಂಕೃಷಿ
ಸುದೀರ್ಘ ಸಮಯದಿಂದ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ವೀರೇಂದ್ರ ಬಾಬು ಅವರ 'ಸ್ವಯಂಕೃಷಿ' ಚಿತ್ರಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಸಿಗುತ್ತಿದೆ. ಈ ಚಿತ್ರ ಸೆಪ್ಟಂಬರ್ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶ್ರೀದುರ್ಗಾಪರಮೇಶ್ವರಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಸ್ವಯಂಕೃಷಿ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ.
ಕಳೆದ ಒಂದು ವರ್ಷದಿಂದ ಬೆಂಗಳೂರಿನ ಸುಣ್ಣಬಣ್ಣ ಕಾಣದ ಗೋಡೆಗಳಿಗೆ ಒಂದಷ್ಟು ರಂಗಿನ ಕಳೆ ತಂದಿತ್ತು ಸ್ವಯಂಕೃಷಿ. ವೀರೇಂದ್ರ ಬಾಬು ಅಭಿಮಾನಿಗಳು ಆಗ ಬರುತ್ತದೆ ಈಗ ಬರುತ್ತದೆ ಎಂದು ನಿರೀಕ್ಷಿಸಿದ್ದೇ ಆಯಿತು. ಆದರೆ ಸ್ವಯಂಕೃಷಿ ಮಾತ್ರ ಸದ್ದಿಲ್ಲದೆ ಗೋಡೆಗಳನ್ನು ಅಲಂಕರಿಸುತ್ತಲೆ ಇತ್ತು.
ತಮ್ಮ ಚಿತ್ರ ತಡವಾಗಿ ಬರುತ್ತಿದ್ದರೂ ದೃಢವಾಗಿರುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ ವೀರೇಂದ್ರ ಬಾಬು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆಡಿಯೋ ಬಿಡುಗಡೆ ಮಾಡಿರುವುದು ಚಿತ್ರದ ವಿಶೇಷಗಳಲ್ಲೊಂದು.
ಅಭಿಮಾನ್ರಾಯ್ ಸಂಗೀತ ನೀಡಿರುವ ಈ ಚಿತ್ರದ ನಾಯಕ ವೀರೇಂದ್ರಬಾಬು. ಚಿತ್ರದ ನಿರ್ದೇಶಕರಾಗಿರುವ ಇವರು ನಿರ್ಮಾಪಕರು ಹೌದು. ತಮನಾ (ತಮನ್ನಾ ಅಲ್ಲ) 'ಸ್ವಯಂಕೃಷಿ' ಚಿತ್ರದ ನಾಯಕಿ. ಚರಣರಾಜ್, ಜೀವನ್, ವಿಜಯ್, ಜನಾರ್ದನ್, ಉಮಾಶ್ರೀ, ರಂಗಾಯಣರಘು, ಕೃಷ್ಣೇಗೌಡ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶಿವರಾಜ್ ಮೇಹು ಅವರ ಸಂಕಲನವಿದೆ. ಕೆ.ಎಂ.ಇಂದ್ರ ಸಂಭಾಷಣೆ, ವಿಜಯ್ಚಂಡೂರ್ ನಿರ್ದೇಶನ ಸಹಕಾರ, ಆರ್.ಜನಾರ್ದನ್ ತಾಂತ್ರಿಕ ಪ್ರಧಾನ ನಿರ್ವಹಣೆ ಹಾಗೂ ಅಚ್ಯುತ್ರಾವ್ ನಿರ್ಮಾಣ ನಿರ್ವಹಣೆ 'ಸ್ವಯಂಕೃಷಿ' ಚಿತ್ರಕ್ಕಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











