ರಾಣಿ ಮುಖರ್ಜಿಗೆ ಕೂಡಿಬಂತು ಕಂಕಣಭಾಗ್ಯ
ಬಾಲಿವುಡ್ ಕೃಷ್ಣ ಸುಂದರಿ ರಾಣಿ ಮುಖರ್ಜಿಗೆ ಕಂಕಣಭಾಗ್ಯ ಕೂಡಿಬಂದಿದೆ. ನವೆಂಬರ್ ತಿಂಗಳಲ್ಲಿ ಬಾಲಿವುಡ್ ನ ರಾಣಿ ಸಪ್ತಪದಿ ತುಳಿಯಲಿದ್ದಾರೆ ಎನ್ನುತ್ತವೆ ಮೂಲಗಳು. ಅಕ್ಟೋಬರ್ ತಿಂಗಳಲ್ಲಿ ದುರ್ಗಾ ಪೂಜೆಯಂದು ಮದುವೆ ದಿನಾಂಕವನ್ನು ಸ್ವತಃ ರಾಣಿ ಮುಖರ್ಜಿ ಅಧಿಕೃತವಾಗಿ ಪ್ರಕಟಿಸಲಿದ್ದಾರಂತೆ.
ರಾಣಿ ಬಾಳಸಂಗಾತಿ ಯಾರಾಗಲಿದ್ದಾರೆ ಎಂಬುದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ . ಈ ಹಿಂದೆ ರಾಣಿಯ ಹೆಸರು ಯಶ್ ರಾಜ್ ಫಿಲಂಸ್ ಮಾಲೀಕ ಆದಿತ್ಯ ಚೋಪ್ರಾ ಜತೆ ಕೇಳಿಬಂದಿತ್ತು. ಆದರೆ ಚೋಪ್ರ ಮತ್ತು ರಾಣಿ ಇಬ್ಬರೂ ಈ ಸುದ್ದಿಯನ್ನು ನಿರಾಕರಿಸಿದ್ದರು. ರಾಣಿಯನ್ನು ಮದುವೆಯಾಗುವ ಸಲುವಾಗಿಯೇ ಆದಿತ್ಯ ಚೋಪ್ರ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿದೆ.
ರಾಣಿ ಸಿನಿಮಾ ವೃತ್ತಿಜೀವನ ಸಹ ಹೇಳಿಕೊಳ್ಳುವಂತಿಲ್ಲ. ಆರಕ್ಕೇರದೆ ಮೂರರಲ್ಲೆ ಗಿರಿಕಿ ಹೊಡೆಯುತ್ತಿದೆ. ವಯಸ್ಸು ಬೇರೆ ಮುವ್ವತ್ತು ಪ್ಲಸ್ ಎರಡು ವರ್ಷ ತುಂಬಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಣಿ ಬೇಗ ರಾಜನನ್ನು ಬರಮಾಡಿಕೊಳ್ಳವ ತವಕದಲ್ಲಿದ್ದಾರೆ.
ಅಧೋಗತಿಗೆ ಇಳಿದಿದ್ದ ಈಕೆಯ ವೃತ್ತಿಜೀವನವನ್ನು ಮೇಲೆತ್ತಲು ಆದಿತ್ಯ ಚೋಪ್ರ ಪ್ರಯತ್ನಿಸಿದ್ದರು. 'ದಿಲ್ ಬೋಲೆ ಹಡಿಪ್ಪ' ಚಿತ್ರ ಮಾಡಿದರಾದರೂ ರಾಣಿಯ ಫಿಲ್ಮಿ ಗ್ರಾಫ್ ಮೇಲೆಕ್ಕೆ ತರಲು ಸಾಧ್ಯವಾಗಲಿಲ್ಲ. ಚಿತ್ರದ ನಾಯಕ ನಟ ಶಾಹಿದ್ ಕಪೂರ್ ಬಣ್ಣಕ್ಕೆ ತಕ್ಕಂತೆ ತಮ್ಮ ಮೈಬಣ್ಣವನ್ನು ರಾಣಿ ಬದಲಾಯಿಸಿಕೊಂಡಿದ್ದರು. ಆದರೂ ಪ್ರೇಕ್ಷಕರ ಹೃದಯವನ್ನು ಗೆಲ್ಲಲ್ಲು ರಾಣಿ ಕೈಯಲ್ಲಿ ಸಾಧ್ಯವಾಗಿರಲಿಲ್ಲ.


Click it and Unblock the Notifications











