ಅಭಿಮಾನಿಗೆ 'ಕಪಾಳಮೋಕ್ಷ' ಕಥೆಗೆ ದರ್ಶನ್ ಉತ್ತರ
ಮೈಸೂರು ಜಿಲ್ಲೆಯ ಬನ್ನೂರು ಚಿತ್ರಮಂದಿರದಲ್ಲಿ ಸಾರಥಿ ಚಿತ್ರ 50 ದಿನ ಪೂರೈಸಿದ್ದರಿಂದ ಆ ಚಿತ್ರಮಂದಿರದ ಮಾಲೀಕರು ಸಂತೋಷ ಕೂಟ ಏರ್ಪಡಿಸಿದ್ದರು. ದರ್ಶನ್ ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಸಂತೋಷಕೂಟ ಮುಗಿಸಿ ಬರುವಷ್ಟರಲ್ಲಿ, 'ದರ್ಶನ್ ಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ' ಎಂಬ ಬ್ರೇಕಿಂಗ್ ನ್ಯೂಸ್ ವಾಹಿನಿಗಳಲ್ಲಿ ಬಿತ್ತರವಾಗುತ್ತಿತ್ತು.
ಇದು ತಿಳಿದ ನಂತರ ದರ್ಶನ್ "ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಅಭಿಮಾನಿಗಳೇ ದೇವರು ಎಂದು ತಿಳಿದುಕೊಂಡಿರುವ ನಾನು, ಅವರ ಮೇಲೆ ಕೈ ಎತ್ತಲಿಕ್ಕೆ ಸಾಧ್ಯವೇ? ಈ ರೀತಿ ಸುದ್ದಿ ಹಬ್ಬಿಸುವವರು ನಿಜಕ್ಕೂ ಉದ್ಧಾರ ಆಗೊಲ್ಲ. ಇದೇ ಸತ್ಯ ಎಂದು ಬಿಂಬಿಸುವ ಮಾಧ್ಯಮಗಳ ಬಗ್ಗೆ ನಾನೇನು ಹೇಳಬೇಕೋ ಗೊತ್ತಾಗುತ್ತಿಲ್ಲ." ಎಂದಿದ್ದಾರೆ.
"ಅಲ್ಲಿ ನಡೆದ ಘಟನೆ ಬೇರೆ, ಆಗಿದ್ದಿಷ್ಟು. ಸಂತೋಷ ಕೂಟ ಮುಗಿಸಿಕೊಂಡು ಚಿತ್ರತಂಡದವರೆಲ್ಲ ಬಸ್ ಹತ್ತಿದರು. ಆ ಬಸ್ಸಿನ ಹಿಂದೆ ಪೋಲಿಸ್ ನಿಂತದ್ದ. ಬಸ್ ಹಿಂತೆಗೆಯುವ ವೇಳೆ ಅಚಾತುರ್ಯದಿಂದ ಅವರ ಕಾಲಿನ ಬೆರಳಿನ ಮೇಲೆ ಚಕ್ರ ಹರಿಯಿತು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇದು ಬಸ್ಸಿನಲ್ಲಿದ್ದವರಿಗೆ ಗೊತ್ತಾಗಲಿಲ್ಲ." ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅನಾವಶ್ಯಕ ಅಪಪ್ರಚಾರದಿಂದ ನೊಂದಿರುವ ದರ್ಶನ್, "ಸ್ಟಾರ್ ಆಗಿರೋದೆ ತಪ್ಪಾ? ಸ್ಟಾರ್ ಉಂಡಿದ್ದು, ಕೆಮ್ಮಿದ್ದು ಸುದ್ದಿ ಮಾಡೋದೇನಾ ಜರ್ನಲಿಸಂ? ಕರ್ನಾಟಕದಲ್ಲಿ ಸೆಲಿಬ್ರಿಟಿ ಆಗಿರೋದೆ ತಪ್ಪಾ?" ಎಂದಿದ್ದಾರೆ. ದಿನಕರ್ ಕೂಡ "ಮೊದಲಿಗಿಂತಲೂ ಈಗ ದರ್ಶನ್ ಬಹಳಷ್ಟು ಬದಲಾಗಿದ್ದಾರೆ. ಅಭಿಮಾನಿಗಳನ್ನು ಬಹಳ ಪ್ರೀತಿಸುತ್ತಾರೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











