ಕೆಂಪೇಗೌಡನಿಗೆ ವಿಘ್ನ ನಿವಾರಣೆ, ಮಾರ್ಚ್ 3ಕ್ಕೆ ತೆರೆಗೆ
ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರಕ್ಕೆ ಎದುರಾಗಿದ್ದ ವಿಘ್ನವೊಂದು ಕಡೆಗೂ ನಿವಾರಣೆಯಾಗಿದೆ. ಬುಧವಾರ (ಫೆ.23) ಮಧ್ಯಾಹ್ನ ಕೆಂಪೇಗೌಡ ಬಿಡುಗಡೆಗೆ ತಡೆಯೊಡ್ಡಿ ಬೆಂಕಿ ಹೊತ್ತಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಜೆ ಹೊತ್ತಿಗೆ ಬೆಂಕಿಯನ್ನು ನಂದಿಸಿದೆ. ಒಟ್ಟಿನಲ್ಲಿ ಸುದೀಪ್ ಮತ್ತು ಬಸಂತಕುಮಾರ್ ಪಾಟೀಲ್ ನಡುವಿನ ನಾಟಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ.
ಸದ್ಯಕ್ಕೆ ಕೆಂಪೇಗೌಡನಿಗೆ ಸೆನ್ಸಾರ್ ಆಗುತ್ತಿದ್ದು ಫೆಬ್ರವರಿ 27 ಅಥವಾ 28 ರ ಹೊತ್ತಿಗೆ ಮೊದಲ ಪ್ರಿಂಟ್ ಹೊರಬೀಳಲಿದೆ. ಚಿತ್ರವನ್ನು ಮಾರ್ಚ್ 3ರಂದು ತೆರೆಗೆ ತರುತ್ತಿರುವುದಾಗಿ ಸುದೀಪ್ ತಿಳಿಸಿದ್ದಾರೆ. ಚಿತ್ರ ವಿತರಕರ ಕಡೆಯಿಂದಲೂ ಕೆಂಪೇಗೌಡನಿಗೆ ಭಾರಿ ಬೇಡಿಕೆ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.
ಕೆಂಪೇಗೌಡನಿಗೆ ಆರಂಭದಿಂದಲೂ ಹಲವಾರು ವಿಘ್ನಗಳು ಎದುರಾಗುತ್ತಲೇ ಇವೆ. ಈ ಹಿಂದೆ 'ಕೆಂಪೇಗೌಡ' ಚಿತ್ರೀಕರಣದ ವೇಳೆ ನಟ ಸುದೀಪ್ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೈಲೂರಿನಲ್ಲಿ ನಡೆದಿತ್ತು. ಚಿತ್ರದ ತಾರಾಗಣದಲ್ಲಿ ಅಂಚಲ್ ಸಬರವಾಲ್, ರವಿಶಂಕರ್ ಪಿ ಹಾಗೂ ಉದ್ಯಮಿ ಅಶೋಕ್ ಖೇಣಿ ಅಭಿನಯಿಸಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ಸಿಂಗಂ' ರೀಮೇಕ್ 'ಕೆಂಪೇಗೌಡ'.


Click it and Unblock the Notifications











