ಪುನೀತ್ಗೆ ನಾಗತಿಹಳ್ಳಿ ನಿರ್ದೇಶನ
- ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ? ಯಾಕಾಗಬಾರದು? ‘ಹಮ್ ಆಪ್ಕೆ ಹೈ ಕೌನ್’ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ ಬಾಲಿವುಡ್ನ ರಾಜಶ್ರೀ ಪ್ರೊಡಕ್ಷನ್ನವರು ಕನ್ನಡ ಚಿತ್ರ ನಿರ್ಮಿಸುತ್ತಿದ್ದು , ಈ ಚಿತ್ರದ ನಾಯಕ-ಪುನೀತ್, ನಿರ್ದೇಶಕ- ನಾಗತಿಹಳ್ಳಿ. ಹಾಗಂತ ಗಾಂಧಿನಗರದ ತುಂಬ ಸುದ್ದಿಯೋ ಸುದ್ದಿ. ಈ ಹಿಂದೆ ಉಪೇಂದ್ರ-ನಾಗತಿಹಳ್ಳಿ ಕಾಂಬಿನೇಷನ್ನ ‘ಸೂಪರ್ ಸ್ಟಾರ್’ ಚಿತ್ರದ ಗತಿ ರಾಜಶ್ರೀ ಚಿತ್ರದ್ದಾಗದಿರಲಿ. ಅಂದಹಾಗೆ, ಹೊಸಚಿತ್ರದ ಹೆಸರು ‘ಪವರ್ ಸ್ಟಾರ್’ ಎಂದಿರಬಹುದಾ?
- ರಾಧಿಕಾ ಅಭಿನಯದ ‘ನಮ್ಮ ಪ್ರೀತಿಗೆ ಜಯ’ ಚಿತ್ರವು 2 ವರ್ಷದ ಹಿಂದೆಯೇ ಚಿತ್ರೀಕರಣಗೊಂಡರೂ ಇನ್ನೂ ಬಿಡುಗಡೆಯಾಗಿಲ್ಲ. ಫೈನಾನ್ಷಿಯರುಗಳು ನಮ್ಮಿಂದ ಪಡೆದ ಹಣವನ್ನು ವಾಪಾಸು ಕೊಡುವವರೆಗೆ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಕಾರಣ ನಿರ್ಮಾಪಕ ಪಾಂಡು ಅವರು ಬೇರೆ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರಂತೆ. ಪಾಪ ಪಾಂಡು!
- ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಿರ್ಮಾಪಕರಾಗುತ್ತಿದ್ದಾರೆ. ಪುನೀತ್ ಅಭಿನಯದ ಚಿತ್ರವನ್ನು ಅವರು ನಿರ್ಮಿಸುತ್ತಿದ್ದಾರೆ. ಈಗಾಗಲೇ ಕಥೆ ಹಾಗೂ ನಿರ್ದೇಶನದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಚಿಗುರಲಿ ಕನಸು!
- ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ ಕನ್ನಡ ಚಲನ ಚಿತ್ರ ಈಗ ವಿಶ್ವಸಂಸ್ಥೆಯ ಗಮನ ಸೆಳೆದಿದೆ. ಈ ಚಿತ್ರದ ವೆಬ್ಸೈಟ್ನ್ನು ರೂಪಿಸಲಾಗಿದ್ದು ಚಿತ್ರದ ಮಾಹಿತಿಯು ಆ ಮೂಲಕ ಲಭ್ಯವಾಗುತ್ತಿದೆ. ಶಾಂತಿ ಚಿತ್ರವು ಏಕೈಕ ಕಲಾವಿದೆಯನ್ನು ಒಳಗೊಂಡ ವಿಶಿಷ್ಟ ಕಲಾತ್ಮಕ ಪ್ರಯೋಗ. ಒಬ್ಬರೇ ಕಲಾವಿದರನ್ನು ಬಳಸಿಕೊಂಡು ಭಯೋತ್ಪಾದಕತೆ ಮತ್ತು ಯುದ್ಧದ ವಿರುದ್ಧ ಧ್ವನಿಪೂರ್ಣವಾಗಿ ಪ್ರತಿಕ್ರಿಯಿಸುವ ಒಂದು ರೂಪಕವಾಗಿ ಶಾಂತಿ ಚಿತ್ರವನ್ನು ಸೃಷ್ಟಿಸಲಾಗಿದೆ. ಇಷ್ಟೆಲ್ಲ ವಿವರವನ್ನು ವಿಶ್ವಸಂಸ್ಥೆ ಚಿತ್ರದ ಸ್ಟಿಲ್ಗಳನ್ನು ನೋಡಿಯೇ ಗ್ರಹಿಸಿದೆಯಂತೆ, ಭಲಾ!
- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತ ಚಿತ್ರವೊಂದು ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ಬೆನ್ನಿ ಹಿನ್ ಉಪಕಥೆಯೂ ಇರುತ್ತದಾ? ಚಿತ್ರಕಥೆ ಬಹಿರಂಗವಾಗಿಲ್ಲ .
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications