ದೇವರುಗಳನಡುವೆ ರಾಜ್ ಹುಟ್ಟುಹಬ್ಬ
ವರನಟ ಡಾ.ರಾಜ್ಕುಮಾರ್ ಅವರಿಗೀಗ 76 ನೇ ಹುಟ್ಟುಹಬ್ಬದ ಸಂಭ್ರಮ.
ಪ್ರತಿ ಹುಟ್ಟುಹಬ್ಬದಂದೂ ಸಾವಿರಾರು ಅಭಿಮಾನಿಗಳು ಅಣ್ಣಾವ್ರ ಮನೆಗೆ ತೆರಳುವುದು, ಸಿಹಿ ತಿನ್ನಿಸುವುದು, ಶುಭಾಶಯ ಕೋರುವುದು, ಹೊಸ ಚಿತ್ರದಲ್ಲಿ ಅಭಿನಯಿಸಿ ಎಂದು ಒತ್ತಾಯಿಸುವುದು ಮಾಮೂಲು. ರಾಜ್ ಹೆಸರಿನಲ್ಲಿ ಅಲ್ಲಲ್ಲಿ ಅನ್ನ ಸಂತರ್ಪಣೆ, ಹಣ್ಣು ವಿತರಣೆ, ರಕ್ತದಾನ ಶಿಬಿರಗಳೂ ನಡೆಯುತ್ತವೆ. ಈ ಬಾರಿಯೂ ರಾಜ್ಯದ ವಿವಿಧ ಭಾಗಗಳಲ್ಲಿ ಇವೆಲ್ಲ ನಡೆದಿವೆ. ರಾಜ್ ಹುಟ್ಟುಹಬ್ಬವೆಂದರೆ ಅಭಿಮಾನಿಗಳ ಪಾಲಿಗದು ನಾಡಹಬ್ಬ !
ಎಪ್ಪತ್ತಾರನೇ ಹುಟ್ಟುಹಬ್ಬವನ್ನು ವರನಟ ಡಾ.ರಾಜ್ಕುಮಾರ್ ಏ.24ರ ಶನಿವಾರ ಸರಳವಾಗಿ ಆಚರಿಸಿಕೊಂಡರು. ನೆರೆದಿದ್ದ ಸಾವಿರಾರು ಅಭಿಮಾನಿ ದೇವರುಗಳು ಭಕ್ತ ಅಂಬರೀಷ ಚಿತ್ರದಲ್ಲಿ ನಟಿಸುವಂತೆ ಅಣ್ಣಾವ್ರನ್ನು ಪ್ರೀತಿಯಿಂದ ಒತ್ತಾಯಿಸಿದರು.
ಕಳೆದ ಬಾರಿ ರಾಜ್ ಹುಟ್ಟುಹಬ್ಬದ ಕೊಡುಗೆಯಾಗಿ ಪುನೀತ್ ಅಭಿನಯದ 'ಅಭಿ" ಸಿನಿಮಾ ಬಿಡುಗಡೆಯಾಗಿತ್ತು . ಅಲ್ಲದೆ ಪುನೀತ್ ಅಪ್ಪನಾದ ಸುದ್ದಿಯಿಂದ ರಾಜ್ ಬರ್ತಡೇ ಖುಷಿ ಇಮ್ಮಡಿಸಿತ್ತು . ಈ ಬಾರಿ ಹೊಸ ಸಿನಿಮಾದ ಬಿಡುಗಡೆಯ ಸಿಹಿಯಿಲ್ಲ ; ಆದರೆ ಹೊಸ ಚಿತ್ರ ಸೆಟ್ಟೇರಿದ ಖುಷಿಗೆ ಕೊರತೆಯಿಲ್ಲ . ಇದು ಪುನೀತ್ ಸಿನಿಮಾ ಸುದ್ದಿಯಲ್ಲ ; ಶಿವರಾಜ್ ಚಿತ್ರಸಂಭ್ರಮ.
ಶಿವರಾಜ್ಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ 'ರಾಕ್ಷಸ" ಚಿತ್ರ ಶನಿವಾರ ಸೆಟ್ಟೇರಿತು. ಕೋಟಿ ನಿರ್ಮಾಪಕ ರಾಮು ರಾಕ್ಷಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೋಕಿಲ ಸಾಧು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ನಡುವೆ ರಾಜ್ ಮತ್ತೆ ಚಿತ್ರಗಳಲ್ಲಿ ಅಭಿನಯಿಸುವ ಕುರಿತು ಮಾತುಕತೆಗಳು ಸದಾಶಿವನಗರದ ಬಂಗಲೆಯಲ್ಲಿ ಕೇಳಿಬರುತ್ತಿವೆ. ಸದ್ಯಕ್ಕೆ ಒಂದು ಸಾಮಾಜಿಕ ಚಿತ್ರದಲ್ಲಿ ಅಭಿನಯಿಸಿ ಎನ್ನುವುದು ಪಾರ್ವತಮ್ಮ ಹಾಗೂ ಪುತ್ರರ ಕೋರಿಕೆ. ರಾಜ್ ಉತ್ತರ- ನಗು . ರಾಜ್ಕುಮಾರ್ ಹಾಗೂ ಅವರ ಮೂವರು ಪುತ್ರರು ಚಿತ್ರವೊಂದರಲ್ಲಿ ಒಟ್ಟಾಗಿ ನಟಿಸುವ ಸಾಧ್ಯತೆಯೂ ಇದೆ.
ಶುಭಾಶಯ : ಚುನಾವಣೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ವರನಟ ರಾಜ್ಕುಮಾರ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕನ್ನಡ ನಾನು ನುಡಿ ಹಾಗೂ ಚಿತ್ರರಂಗಕ್ಕೆ ರಾಜ್ ಅವರಿಂದ ಇನ್ನಷ್ಟು ಸೇವೆ ಸಲ್ಲಲಿ ಎಂದು ಹುಟ್ಟುಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ ಹಾರೈಸಿದ್ದಾರೆ.


Click it and Unblock the Notifications