‘ರಾಜ್’ ಇಲ್ಲದ ರಾಜ್ಯದಲ್ಲೀಗ ಹುಟ್ಟು ಹಬ್ಬದ ಸಡಗರ
ಬೆಂಗಳೂರು : ಇಂದು(ಏಪ್ರಿಲ್ 24) ವರನಟ ಡಾ.ರಾಜ್ಕುಮಾರ್ ನಮ್ಮೊಂದಿಗಿದ್ದಿದ್ದರೆ, 78ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ತಮ್ಮ ಹುಟ್ಟುಹಬ್ಬಕ್ಕೆ ಹನ್ನೆರಡು ದಿನ ಮುಂಚಿತವಾಗಿಯೇ ರಾಜಣ್ಣ ಪರಲೋಕಕ್ಕೆ ತೆರಳಿದರು!
ಸಾವಿನ ನೋವಿನ ನಡುವೆಯೇ ತಮ್ಮ ಆರಾಧ್ಯ ದೈವ ರಾಜ್ರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು, ವಿವಿಧ ಅಭಿಮಾನಿ ಸಂಘಟನೆಗಳು ಮುಂದಾಗಿವೆ.
- ಪ್ರತಿವರ್ಷದ ಸಂಪ್ರದಾಯವನ್ನು ಮುಂದುವರೆಸುವುದಾಗಿ ತಿಳಿಸಿರುವ ರಾಜ್ ಕುಟುಂಬ, ಎಂದಿನಂತೆಯೇ ತಮ್ಮ ಮನೆಗೆ ಆಗಮಿಸುವ ಅಭಿಮಾನಿಗಳಿಗೆ ಸಿಹಿ ವಿತರಿಸುವುದಾಗಿ ತಿಳಿಸಿದೆ.
- ಕರ್ನಾಟಕ ರಕ್ಷಣಾ ವೇದಿಕೆ, ರಾಜ್ ನಿಧನದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ಧನ ನೀಡಲಿದೆ. ಅಲ್ಲದೆ ರಾಜ್ ನೇತ್ರದಾನದಿಂದ ಸ್ಫೂರ್ತಿ ಪಡೆದಿರುವ ವೇದಿಕೆ ಕಾರ್ಯಕರ್ತರು ನೇತ್ರದಾನಕ್ಕೆ ಸಹಿಹಾಕಲಿದ್ದಾರೆ. ಈ ಕುರಿತ ಕಾರ್ಯಕ್ರಮ ಯವನಿಕ ಸಭಾಂಗಣದಲ್ಲಿ ನಡೆಯಲಿದೆ.
- ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ, ಅನಿಕೇತನ ಸಾಂಸ್ಕೃತಿಕ ವೇದಿಕೆ ರಾಜ್ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಿ.ಬಿ.ಶ್ರೀನಿವಾಸ್, ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವತ್ಥ್, ಮೊದಲಾದವರು ಹಾಡಲಿದ್ದಾರೆ.
- ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಅನ್ನದಾನ ಹಾಗೂ ವಸ್ತ್ರ ವಿತರಣೆ ಹಮ್ಮಿಕೊಂಡಿದೆ. ಶ್ರೀರಾಮಪುರ ನಾಗರಿಕರ ವೇದಿಕೆ, ರಾಜ್ ನಿಧನಾನಂತರ ಹಿಂಸಾಚಾರದಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರ ಧನ ವಿತರಿಸಲಿದೆ. ಮಾವಳ್ಳಿ ಕರ್ನಾಟಕ ಸಂಘ ನೇತ್ರದಾನ ಕಾರ್ಯಕ್ರಮ ಏರ್ಪಡಿಸಿದೆ.
- ಶಿವರಾಜ್ಕುಮಾರ್ ಸೇನಾ ಸಮಿತಿ ಬಡ ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಬಟ್ಟೆ ಹಾಗೂ ಪುಸ್ತಕ ವಿತರಣೆ ಮಾಡಲಿದೆ. ವೀರ ಸೇನಾನಿ ಮ.ರಾಮಮೂರ್ತಿ ಕನ್ನಡ ಬಳಗ, ರಾಜ್ ಸ್ಮರಣಾರ್ಥ ಶೇಷಾದ್ರಿಪುರ ವೃತ್ತಕ್ಕೆ ಮಯೂರ ವೃತ್ತ ಎಂದು ನಾಮಕರಣ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
- ನೇತ್ರಾವತಿ ಕನ್ನಡ ಸಂಘದ 101 ಸದಸ್ಯರು ಸಾಮೂಹಿಕ ತಲೆ ಬೋಳಿಸಿಕೊಂಡು, ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದಾರೆ. ಅನ್ನದಾನವನ್ನು ಇಂದು ಹಮ್ಮಿಕೊಂಡಿದ್ದಾರೆ.
- ಗಿರಿನಗರದಲ್ಲಿರುವ ಸೀತಾ ವೃತ್ತವನ್ನು ‘ಮುತ್ತುರಾಜ್’ ವೃತ್ತವೆಂದು, ವಿದ್ಯಾಪೀಠ ವೃತ್ತದಿಂದ ರಿಂಗ್ರಸ್ತೆವರೆಗಿನ ರಸ್ತೆಯನ್ನು ‘ಮುತ್ತುರಾಜ್ ರಸ್ತೆ’ಯೆಂದು ಸೋಮವಾರ ನಾಮಕರಣ ಮಾಡಲಾಗುತ್ತಿದೆ.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications