ರಾಜ್ ಹುಟ್ಟು ಹಬ್ಬ : ವಿಷಾದದ ನಡುವೆಯೂ ಸಂಭ್ರಮ
ಬೆಂಗಳೂರು : ವರನಟ ಡಾ.ರಾಜ್ಕುಮಾರ್ ತೀರಿಹೋಗಿ ಒಂದು ವರ್ಷವಾಗಿದೆ. ಈ ಬೇಸರದ ಮಧ್ಯೆಯೂ ಅವರ 79ನೇ ಹುಟ್ಟುಹಬ್ಬ ನಾಡಿನಾದ್ಯಂತ ಸಂಭ್ರಮದಿಂದ ನಡೆಯುತ್ತಿದೆ.
ರಾಜ್ ತೀರಿದನಂತರ ನಡೆಯುತ್ತಿರುವ ಮೊದಲ ಹುಟ್ಟುಹಬ್ಬವಿದು. ರಾಜ್ ನಮ್ಮೊಡನೆ ಶಾಶ್ವತವಾಗಿ ಇದ್ದಾರೆ ಎಂಬ ಭಾವನೆಯಲ್ಲೇ ರಾಜ್ಯಾದ್ಯಂತ ಹುಟ್ಟುಹಬ್ಬ ಸಡಗರದಿಂದ ನಡೆಯುತ್ತಿದೆ.
ರಾಜ್ಕುಮಾರ್ ಅಭಿನಯ ಮಾತ್ರದಿಂದ ಮನ್ನಣೆಗಳಿಸಿದ ವ್ಯಕ್ತಿಯಲ್ಲ. ಅವರು ಸರಳತೆ-ಸಭ್ಯತೆಯ ಪ್ರತಿರೂಪವಾಗಿದ್ದರು. ನಾಡು-ನುಡಿ ಬಗ್ಗೆ ಅಪಾರ ಅಭಿಮಾನವುಳ್ಳವರಾಗಿದ್ದರು. ಈ ಘನವಾದ ಸ್ವರೂಪದಿಂದಲೇ ರಾಜ್ ಕನ್ನಡ ಜನಮಾನಸದ ಆರಾಧ್ಯದೈವವಾಗಿ ಬೆಳೆದದ್ದು. ರಾಜ್ ದೈಹಿಕರೂಪದಲ್ಲಿ ಈಗ ನಮ್ಮೊಂದಿಗಿಲ್ಲ. ಆದರೆ ಅವರ ಚೈತನ್ನದ ಇರುವಿಕೆ ಕನ್ನಡ ಇರುವವರೆಗೆ ನಿರಂತರ...
ಅಲ್ಲಲ್ಲಿ ರಾಜ್ ಪ್ರತಿಮೆ-ಭಾವಚಿತ್ರಗಳಿಗೆ ಪೂಜೆ ನಡೆಯುತ್ತಿದೆ. ಫಲ-ಪುಷ್ಪಗಳನ್ನು ಅರ್ಪಿಸಲಾಗುತ್ತಿದೆ. ‘ಇದೋ ರಾಜ್ ಮುಂದೆ ಬಂದು ನಿಂತೇಬಿಟ್ಟರು...’ ಎನ್ನುವ ರೀತಿಯಲ್ಲಿ ಅವರ ಮಧುರ-ಮನೋಹರ ಕಂಠದ ಗೀತೆಗಳು ತೇಲಿಬರುತ್ತಿವೆ. ವಿವಿಧ ರಾಗರಸಗಳ ಗೀತೆಗಳು ಮತ್ತೆ ಮನಸೂರೆಗೊಳ್ಳುತ್ತಿವೆ. ‘ನಾದಮಯ ಈ ಲೋಕವೆಲ್ಲ...’ ಎಂಬ ಗೀತೆ ನಮ್ಮನ್ನು ಮತ್ತೆ ರಾಜ್ ನಾದಲೋಕಕ್ಕೆ ಸೆಳೆದುಕೊಳ್ಳುತ್ತದೆ...
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications