ಗಡಿ ಗೆದ್ದು, ಕನ್ನಡಿಗರ ಮನಗೆದ್ದು ತೆಲುಗಿನತ್ತ ಸೈನಿಕನ ಕಣ್ಣು !
ಟಾಲಿವುಡ್ಗೆ ಯೋಗೇಶ್ವರ್ 'ಸೈನಿಕ"ನ ಮಾರ್ಚ್ ಫಾಸ್ಟ್ !
'ಸೈನಿಕ" ಬಕ್ಕಾ ಬೋರಲಾಗದಿದ್ದರೂ, ಯೋಗೇಶ್ವರ್ ಹರಿಸಿರುವ ದುಡ್ಡನ್ನು ತುಂಬಿಕೊಡುವುದಂತೂ ಸುಳ್ಳು. ಇದನ್ನು ಬಲು ಬೇಗ ಅರಿತಿರುವ ಯೋಗೇಶ್ವರ್ ಇದೇ ಚಿತ್ರವನ್ನು ತೆಲುಗಿನಲ್ಲಿ ಚಿತ್ರೀಕರಿಸಲು ತೀರ್ಮಾನಿಸಿದ್ದಾರೆ.
ತೆಲುಗಿನಲ್ಲೂ ಇವರೇ ಹೀರೋ. ಆದರೆ, ಬೇರೆ ಪಾತ್ರಗಳನ್ನು ಟಾಲಿವುಡ್ನವರಿಂದಲೇ ಮಾಡಿಸಲು ತೀರ್ಮಾನಿಸಿದ್ದಾರೆ. ಲೇಹ್ನಂಥಾ ಪರ್ವತಕ್ಕೆ ಹೋಗಿ ಶೂಟಿಂಗ್ ಮಾಡಿಕೊಂಡು, ಮಿಲಿಟರಿ ವಲಯಗಳಲ್ಲೆಲ್ಲಾ ಅಡ್ಡಾಡಿ ಅನುಮತಿ ಗಿಟ್ಟಿಸಿಕೊಂಡು, ಸಾಕಷ್ಟು ತ್ರಾಸು ಪಟ್ಟು 'ಸೈನಿಕ"ನನ್ನು ಯೋಗೇಶ್ವರ್ ತೆರೆಗೆ ತಂದಿದ್ದಾರೆ. ಇವರ ಶ್ರಮಕ್ಕೆ ತಕ್ಕಂತೆ ಚಿತ್ರ ಮೂಡಿದೆ. ಮಾಧ್ಯಮಗಳ ಹೊಗಳಿಕೆಗೂ ಇದು ಪಾತ್ರವಾಗಿದೆ.
ಇಷ್ಟಾಗಿಯೂ ಯೋಗೇಶ್ವರ್ ಅಭಿಮಾನಿಗಳಿಲ್ಲದ ನಟನಲ್ಲವೇ? ಫಸ್ಟ್ ರೆಸ್ಪಾನ್ಸ್ ಅಷ್ಟೇನೂ ಚೆನ್ನಾಗಿಲ್ಲ. ಹಾಗೆ ನೋಡಿದರೆ ಅಪ್ಪು, ನಿನಗಾಗಿ ಮತ್ತು ಡಕೋಟಾ ಎಕ್ಸ್ಪ್ರೆಸ್ ಇವತ್ತೂ ಹೌಸ್ಫುಲ್ ಆಗಿ ಓಡುತ್ತಿವೆ. ಸಾಲದ್ದಕ್ಕೆ ಶುಕ್ರವಾರ ಉಪ್ಪಿ ಅಭಿನಯದ ಸೂಪರ್ ಸ್ಟಾರ್ ಬಿಡುಗಡೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬರೀ ಕರ್ನಾಟಕದಲ್ಲಿ 'ಸೈನಿಕ"ನನ್ನು ತೋರಿ ದುಡ್ಡು ಮಾಡುವುದು ಖಂಡಿತ ಸಾಧ್ಯವಿಲ್ಲ. ತೆಲುಗಿನ ಜನರಿಗೆ ಟೇಸ್ಟಿದೆ. ಅಲ್ಲಿ 'ಸೈನಿಕ"ನಿಗೆ ಜಯ ಗ್ಯಾರಂಟಿ ಅನ್ನೋದು ಯೋಗೇಶ್ವರ್ ಅಂಬೋಣ. ಅಂದಹಾಗೆ, ಯುದ್ಧದ ಶಾಟ್ಗಳು ಕನ್ನಡದ ಚಿತ್ರದಲ್ಲಿರುವ ಹಾಗೆಯೇ ಉಲಿಸಿಕೊಳ್ಳುತ್ತಾರೆ. ಯಾಕೆಂದರೆ, ಮತ್ತೆ ಲೇಹ್ಗೆ ಹೋಗುವುದು, ಮಿಲಿಟರಿ ಅಧಿಕಾರಿಗಳನ್ನು ಎಡತಾಕುವುದು ಯೋಗೇಶ್ವರ್ಗೀಗ ಸುತಾರಾಂ ಬೇಡ. ಅವರು ಭರಿಸಿಕೊಳ್ಳಲು ಹೋಗುತ್ತಿರುವುದು ಆಗಿರುವ ನಷ್ಟವನ್ನಲ್ಲವೇ?


Click it and Unblock the Notifications