ಉಪ್ಪಿ ದ್ವಿಪಾತ್ರದ ಸೂಪರ್ಸ್ಟಾರ್: ಹಾನಿಕರ,
ನೇಪಾಳ ರಾಜಕುಮಾರ್ ದೀಪೇಂದ್ರ,
ಸಿಂಗರ್ ಹಾಗೂ ಡ್ಯಾನ್ಸರ್ ರಿಕ್ಕಿ,
ಒಬ್ಬಳು ದೇವಯಾನಿ,
ಇಬ್ಬರು ಉಪೇಂದ್ರ,
ಒಂದು ಪ್ರೇಮಕಥೆ...
- ಇಷ್ಟಕ್ಕೇ ಉಪೇಂದ್ರರ ಕಥೆ ಎಂದೂ ನಿಲ್ಲುವುದಿಲ್ಲ ! ನೇಪಾಳದ ರಾಜಮನೆತನದ ದುರಂತಕ್ಕೆ ಉಪೇಂದ್ರ ಕಥೆ ಹೆಣೆದರೆ, ಹಂಸಲೇಖಾರ ಸಂಗೀತ-ಸಾಹಿತ್ಯ ಕಥೆಗೆ ಭಾವನೆಯನ್ನು ತುಂಬಿದೆ. ಕೆಲವೊಂದು ಕಡೆ ಅಬ್ಬರವೆನಿಸಿದರೂ ಹಾಡುಗಳ ಟ್ಯೂನ್ ಚೆನ್ನಾಗಿ ಮೂಡಿ ಬಂದಿದೆ. ಅದ್ನಾನ್ ಸಮಿ ಹಾಡಿದ 'ಬಿಟ್ಟಾಕು, ಬಿಟ್ಟಾಕು" ಹಾಡು ಪ್ರೇಕ್ಷಕರ ಮನ ಗೆದ್ದಿದೆ.
ದೀಪೇಂದ್ರನ ಪಾತ್ರದಲ್ಲಿ ತಿಳಿಹಾಸ್ಯದೊಂದಿಗೆ ಉಪೇಂದ್ರರ ಅಭಿನಯ ಹಾಗೂ ದೇವಯಾನಿಯಾಗಿ ಕೀರ್ತಿ ರೆಡ್ಡಿ ಅಭಿನಯ ಶ್ಲಾಘನೀಯ. ನಾಗತಿಹಳ್ಳಿ ಅವರ ನಿರ್ದೇಶನ ಎಲ್ಲೂ ಎದ್ದು ಕಾಣದಿದ್ದರೂ, ಕೆಲವು ಸನ್ನಿವೇಶಗಳಲ್ಲಿ ಪ್ರೀತಿಯ ಭಾವುಕತೆಯನ್ನು ತೋರಿಸುವ ಪ್ರಯತ್ನ ಕಾಣಬಹುದು. ಬ್ಯಾಂಕಾಕ್ ಚಿತ್ರೀಕರಣ, ಕೃಷ್ಣಕುಮಾರ್ ಕ್ಯಾಮರಾ ಚಲನೆ, ಶಶಿಕುಮಾರ್ ಅವರ ವೇಗದ ಸಂಕಲನ, ಚಿತ್ರಕ್ಕೆ ಹೊಸ ಆಯಾಮವನ್ನೇ ಕೊಟ್ಟಿದೆ. ಆದರೆ ಇಷ್ಟೇ ಉಪೇಂದ್ರರ ಚಿತ್ರವಾಗಲಾರದು!
ಕನ್ನಡ ಚಿತ್ರರಂಗದಲ್ಲಿ ಕಾಣಸಿಗದ, ಹಾಲಿವುಡ್ ಚಿತ್ರಗಳಲ್ಲಿ ತುಂಬಿ ತುಳುಕುವ ಉನ್ನತ ಮಟ್ಟದ ಗ್ರಾಫಿಕ್ಸ್ ಎಫೆಕ್ಟ್ ಉಪೇಂದ್ರರ ದ್ವಿಪಾತ್ರಕ್ಕೆ ಜೀವ ತುಂಬುವುದಲ್ಲದೆ, ಚಿತ್ರದ ಹಲವು ಸನ್ನಿವೇಶಗಳಲ್ಲಿ ಕಣ್ಮನ ಸೆಳೆಯುತ್ತದೆ. ಉಪೇಂದ್ರ ಅವರ ಚಿತ್ರಕಥೆ ಎಂದಿನಂತೆ ಪ್ರತಿ ಫ್ರೇಂನಲ್ಲೂ ಪ್ರೇಕ್ಷಕನ ನಿರೀಕ್ಷೆಗೆ ಮೀರಿ ಸಾಗುತ್ತದೆ.
ಮನೋಹರ್ ಅವರ ಹಾಸ್ಯ ಸನ್ನಿವೇಶ, ವಿಶ್ವಾಮಿತ್ರ ಎಪಿಸೋಡ್, ಆಸ್ಪತ್ರೆಯಲ್ಲಿ ಉಪೇಂದ್ರರ ಏಕಪಾತ್ರಾಭಿನಯ, ಹುಲಿ ಚಿರತೆಗಳ ಸನ್ನಿವೇಶ, ಪ್ರೇಕ್ಷಕರನ್ನು ರಿಲ್ಯಾಕ್ಸ್ಗೊಳಿಸುತ್ತವೆ.
ಇದಿಷ್ಟೇ ಚಿತ್ರವಾಗಿದ್ದರೆ ಅದು 'ಸೂಪರ್ ಸ್ಟಾರ್" ಆಗುತ್ತಿರಲಿಲ್ಲ . ಈ ಬಾರಿಯ ಫುಟ್ಬಾಲ್ ವಿಶ್ವಕಪ್ನಲ್ಲಿ ಪಂದ್ಯದ ಕೊನೆ ಕ್ಷಣದಲ್ಲಿ ಗೋಲ್ ಗಳಿಸಿ ಗೆದ್ದ , ಕೊನೆ ಕ್ಷಣದ ತನಕ ಕುತೂಹಲ ಕಾಯ್ದಿರಿಸಿದ ಪಂದ್ಯಗಳಿವೆ. 90 ನಿಮಿಷದ ಪಂದ್ಯದಲ್ಲಿ , ಕೊನೆ ನಿಮಿಷವೂ ಮಹತ್ವದ್ದು ಎಂದು ಆಟಗಾರರು ಸಾಬೀತು ಪಡಿಸಿದ್ದಾರೆ. ಹಾಗೆಯೇ ಉಪೇಂದ್ರ ಕೂಡ. ಚಿತ್ರದ ಕೊನೆ ಕ್ಷಣಗಳೂ ಎಷ್ಟು ಮಹತ್ವ ಎನ್ನುವುದನ್ನು , ಎಂದೂ ನೋಡದ, ಯಾರೂ ಊಹಿಸದ, ಕ್ಲೈಮಾಕ್ಸ್ಗಳಿಗೇ ಕ್ಲೈಮಾಕ್ಸ್ ಕೊಟ್ಟು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿ... ಮತ್ತೊಮ್ಮೆ ಗೆದ್ದಿದ್ದಾರೆ.
ಕ್ಲೈಮಾಕ್ಸ್ಗಳ ಕ್ಲೈಮಾಕ್ಸ್ನ ಕೊನೆಯ ಕ್ಲೈಮಾಕ್ಸ್ ತಪ್ಪಿಸಿಕೊಂಡರೆ ಆರೋಗ್ಯಕರ ಮನರಂಜನೆಗೆ 'ಕಂಡಿತ" ಹಾನಿಕರ !


Click it and Unblock the Notifications