ಸಲ್ಮಾನ್ ಖಾನ್ ಗೆ ಜೈಲು: ನ್ಯಾಯಕ್ಕೆ ಇನ್ನೊಂದು ಜಯ!
ಜೋಧ್ ಪುರ, ಆಗಸ್ಟ್ 24 : ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು, ಜೋಧ್ ಪುರ ನ್ಯಾಯಾಲಯ ಶುಕ್ರವಾರ ಎತ್ತಿ ಹಿಡಿದಿದೆ.
ವಿಚಾರಣೆ ಪೂರ್ಣಗೊಳಿಸಿದ ಜೋಧ್ ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಆರ್.ಸಿಂಘ್ವಿ , ಇಂದು ಮಹತ್ವದ ತೀರ್ಪು ನೀಡಿದ್ದಾರೆ.
ಏಪ್ರಿಲ್ 2006ರಲ್ಲಿ ಕೃಷ್ಣ ಮೃಗ ಬೇಟೆಗೆ ಸಂಬಂಧಿಸಿದಂತೆ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಖಾನ್ ಗೆ ಐದು ವರ್ಷ ಶಿಕ್ಷೆ ಮತ್ತು ಇಪ್ಪತ್ತೈದು ಸಾವಿರ ರೂ.ದಂಡ ವಿಧಿಸಿತ್ತು. ಈ ತೀರ್ಪನ್ನು ಸಲ್ಮಾನ್ ಖಾನ್, ಜೋಧ್ ಪುರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಖಾನ್ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.
1998ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್, ಎರಡು ಕೃಷ್ಣ ಮೃಗಗಳ ಬೇಟೆಯಾಡಿದ್ದರು. ಈ ಪ್ರಕರಣದ ಜೊತೆಗೆ ಭಾವಡ್ ನಲ್ಲಿ ಒಂದು ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣವೂ ಖಾನ್ ವಿರುದ್ಧ ದಾಖಲಾಗಿದ್ದು, ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಶಿಕ್ಷೆ ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ ನಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಸದ್ಯದಲ್ಲೇ ಆರಂಭವಾಗಲಿದೆ.
ಮೊನ್ನೆಯಷ್ಟು ಸಂಜಯ್ ದತ್ ಗೆ ಜೈಲು ಶಿಕ್ಷೆ ನೀಡಿದ ಟಾಡಾ ವಿಶೇಷ ನ್ಯಾಯಾಲಯ, ನ್ಯಾಯವನ್ನು ಎತ್ತಿ ಹಿಡಿದಿತ್ತು. ಈ ಬೆನ್ನಲ್ಲಿಯೇ ಇನ್ನೊಬ್ಬ ನಟ ಸಲ್ಮಾನ್ ಖಾನ್ ಗೆ ಶಿಕ್ಷೆಯಾಗಿದೆ. ಕಾನೂನಿಗೆ ಕಣ್ಣಿದೆ ಎಂದು ಸಾಮಾನ್ಯರು ನಂಬಲು ಈ ಪ್ರಕರಣಗಳು ಸಾಕ್ಷಿಯಾಗಿವೆ
. (ಏಜನ್ಸೀಸ್)


Click it and Unblock the Notifications