Don't Miss!
- News Neha Hiremath: ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ರಮ್ಯ ಚೈತ್ರ ಕಾಲ’ದಲ್ಲಿ ದೇಸಾಯಿ!
ಇದು ಯಾರಿಗೆ ರಮ್ಯ ಚೈತ್ರ ಕಾಲ? ಸುಮಾರು ಒಂದೂವರೆ ವರ್ಷ ಸದ್ದಿಲ್ಲದೇ ಅಜ್ಞಾತ ವಾಸ ಮುಗಿಸಿ ಮರಳಿ ಬಂದ ದೇಸಾಯಿಗೋ? ಚಿತ್ರದಲ್ಲಿ ತೆರೆಯ ಹಿಂದೆ-ಮುಂದೆ ಇರುವ ಬಹುತೇಕ ಹೊಸ ಮುಖಗಳಿಗೋ? ಗೊತ್ತಿಲ್ಲ.
ಮಚ್ಚು, ಲಾಂಗ್,ಕತ್ತಿ, ಚಾಕು, ಏಕೆ-47, ಹೊಡಿಬಡಿ ಎನ್ನುವ ಅಬ್ಬರದ ಚಿತ್ರಗಳದೇ ಈಗ ಸಂತೆ. ಈ ಚಿತ್ರಗಳನ್ನು ನೋಡಿ ಬಳಲಿ ಬಾಯಾರಿದವರಿಗೆ ಸುಂದರ ಮುದ ನೀಡುವ ದೃಶ್ಯ-ಕಾವ್ಯವನ್ನು ಕಟ್ಟಿಕೊಡುವುದು ಸುನೀಲ್ಕುಮಾರ್ ದೇಸಾಯಿ ಕನಸು. ಅವರ ಕೆಲಸ ಹಗುರ ಮಾಡಲು ಜಯಂತ್ ಕಾಯ್ಕಿಣಿ ಜೊತೆಯಲ್ಲಿದ್ದಾರೆ. ಚಿತ್ರದ ಶೀರ್ಷಿಕೆಯಲ್ಲಿಯೇ ದೇಸಾಯಿ ಗೆಲುವಿನ ಒಂದು ಮೆಟ್ಟಿಲು ಹತ್ತಿದ್ದಾರೆ.
ಚಿತ್ರದ ಹೆಸರನ್ನು ಹೇಳುವಾಗಲೇ, ಕೇಳುವಾಗಲೇ ಒಂದು ರೀತಿಯ ಪುಳಕ... ಸಂತೋಷ... ಖುಷಿ ಇನ್ನು ಏನೇನೋ... ಇದು ರಮ್ಯ ಚೈತ್ರ ಕಾಲವಯ್ಯಾ!
ಅರ್ಕಾವತ್ತಿನ ಚಿತ್ರಗಳ ಸೂತ್ರವನ್ನು ಪಕ್ಕಕ್ಕಿಟ್ಟು, ಏಳು ಸುತ್ತಿನ ಕೋಟೆ ಚಿತ್ರದ ಹಾಡಿನ ಸಾಲೊಂದನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ. ಈ ಹಿಂದೆ ಬಂದ ನಮ್ಮೂರ ಮಂದಾರ ಹೂವೇ... ಸಹಜವಾಗಿಯೇ ಚಿತ್ರರಸಿಕರಿಗೆ ನೆನಪಾಗುತ್ತದೆ. ಅಲ್ಲಿಗೆ ದೇಸಾಯಿ ಗೆಲುವಿನ ಎರಡನೇ ಮೆಟ್ಟಿಲು ಹತ್ತಿದಂತಾಗಿದೆ. ಹೀಗಾಗಿ ನಿರೀಕ್ಷೆಗಳ ಹೊರೆ ಸಹ ಹೆಚ್ಚು.
ಚಿತ್ರದ ನಿರ್ಮಾಣ ಡಿ.ರಮೇಶ್ ಅವರದು. ನಾಯಕನ ಬಾಳಲ್ಲಿ ನಾಯಕಿ, ನಾಯಕಿ ಬಾಳಲ್ಲಿ ನಾಯಕ ಹೇಗೆ ರಮ್ಯಚೈತ್ರ ಕಾಲವಾಗುತ್ತಾರೆ ಎನ್ನುವುದು ಚಿತ್ರದ ಕಥಾವಸ್ತು. ಇದು ಮಲೆನಾಡಿನ ಪ್ರೇಮಕತೆಯಾದ ಕಾರಣ ಕಣ್ಣು ತುಂಬಲು ಪ್ರಕೃತಿ ಸಜ್ಜಾಗಿದೆ. ಚಿತ್ರದ ಛಾಯಾಗ್ರಾಹಕ, ಸಂಗೀತ ನಿರ್ದೇಶಕ, ನಟ, ನಟಿಯರು ಎಲ್ಲರೂ ಹೊಸಬರು. ಹೀಗಾಗಿ ದೇಸಾಯಿ ತಿಣುಕಾಟಕ್ಕೆ ಹೆಚ್ಚಿನ ಅವಕಾಶವಿದೆ.
ಹೊಸಬರನ್ನು ಹಾಕಿಕೊಂಡು ಚಿತ್ರಮಾಡುವುದು ದೇಸಾಯಿಗೆ ಹೊಸದಲ್ಲ. ಹಿಂದೆ 'ಸ್ಪರ್ಶ" ಮಾಡಿದ್ದು ಎಲ್ಲರಿಗೂ ನೆನಪಿದೆ. ನಾಯಕ-ನಾಯಕಿ ಇಬ್ಬರೂ ಸಹ ಹೊಸ ಹೆಸರುಗಳಿಂದ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಕಾರ್ಮುಗಿಲು ಚಿತ್ರದ ನಾಯಕ ಮನೋಜ್ಗೆ ಈ ಚಿತ್ರದಿಂದ ಸಂದೀಪ್ ಎಂದು ಮರು ನಾಮಕರಣ ಮಾಡಲಾಗಿದೆ. ಕಿರುತೆರೆ, ಬೆಳ್ಳಿತೆರೆಯಲ್ಲಿ ಅಲ್ಲಲ್ಲಿ ಕಾಣಿಸಿದ್ದ ಅರ್ಚನಾ(ಕೌಶಿಕಿ), ಈ ಚಿತ್ರದಲ್ಲಿ ನಂದಿತಾ.
ಚಿತ್ರದ ಜೀವಾಳವಾದ ಸಂಭಾಷಣೆ ಬರೆಯಲು ಜಯಂತ ಕಾಯ್ಕಿಣಿ ಮುಂದಾಗಿದ್ದಾರೆ. ಅವರು ನನಗೆ ಹತ್ತು ವರ್ಷಗಳ ಹಿಂದೆ ಸಿಕ್ಕಿದ್ದರೆ ಇನ್ನಷ್ಟು ಒಳ್ಳೆಯ ಚಿತ್ರ ನೀಡುತ್ತಿದ್ದೆ ಎಂದು ದೇಸಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿನ ಅರ್ಧ ಡಜನ್ ಹಾಡುಗಳನ್ನು ಜಯಂತ್, ದೊಡ್ಡರಂಗೇಗೌಡ, ಕಲ್ಯಾಣ್ ಬರೆದಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ವೃತ್ತಿಗೆ ವಿದಾಯ ಹೇಳಿ, ಸ್ಯಾಂಡಲ್ವುಡ್ಗೆ ಬಂದಿರುವ ಶ್ಯಾಮ್ಸುಂದರ್ ಸಂಗೀತ ಚಿತ್ರಕ್ಕಿದೆ. ಚಿಕ್ಕಮಗಳೂರಿನ ಚಂದ್ರಶೇಖರ್ ಚಿತ್ರದ ಛಾಯಾಗ್ರಾಹಕರಾಗಿ ಕ್ಯಾಮರ ಹಿಡಿದಿದ್ದಾರೆ.
'ರಮ್ಯ ಚೈತ್ರ ಕಾಲ" ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. ಶಿರಸಿ, ಕಾರವಾರ, ಗೋಕರ್ಣ, ಬನವಾಸಿ ಮತ್ತಿತರ 50 ಕಡೆ ಚಿತ್ರೀಕರಿಸುವ ಯೋಜನೆ ದೇಸಾಯಿ ಅವರದು. ದಕ್ಷಿಣ ಕನ್ನಡದ ಸುಂದರ ತಾಣಗಳನ್ನು ನೋಡದವರು ವ್ಯಥೆಪಡುವಂತಿಲ್ಲ ! ಇಂತಹವರಿಗೆ ರಂಜನೆಯಾಂದಿಗೆ ಟೂರ್ ಮಾಡುವ ಅವಕಾಶ ಸಹ ಸಿಗುವ ಸಾಧ್ಯತೆಗಳಿವೆ.
ಮರ್ಮ ನಂತರ ಕಣ್ಮರೆಯಾಗಿದ್ದ, ಸುನೀಲ್ಕುಮಾರ್ ದೇಸಾಯಿ ಚಿಕ್ಕ ಬಜೆಟ್ನಲ್ಲಿ ದೊಡ್ಡ ಚಿತ್ರಕಟ್ಟಲು ಮುಂದಾಗಿದ್ದಾರೆ. ಅವರಿಗೆ ಬೆಸ್ಟ್ ಆಫ್ ಲಕ್.