ಕಿವಿ ಹಿಡಿದು ಮಂಡ್ಯ ಜನರ ಕ್ಷಮೆ ಕೇಳಿದ ನಟ ದರ್ಶನ್
ನಟ ದರ್ಶನ್ ಅವರ ಸಾರಥಿ ಯಾತ್ರೆ ಮಂಗಳವಾರ (ಅ.25) ಸಕ್ಕರೆ ನಾಡು ಮಂಡ್ಯ ನಗರಕ್ಕೆ ಆಗಮಿಸಿತು. ಅವರ ಆಗಮನ ಮೊದಲೇ ತಿಳಿದಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ಭರಮಾಡಿಕೊಳ್ಳಲು ಕಾತುರದಿಂದ ಕಾದಿದ್ದರು.
ತೆರೆದ ವಾಹನದಲ್ಲಿ ಬಂದ ಅವರು ಅಭಿಮಾನಿಗಳ ಕಡೆಗೆ ಕೈಬೀಸಿ ಶುಭಾಶಯ ಕೋರಿದರು. ಬಳಿಕ ಅವರು ನನ್ನಿಂದ ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ತಮ್ಮ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆದು ಕ್ಷಮೆಯಾಚಿಸಿದರು. ದರ್ಶನ್ ಕ್ಷಮೆಯಾಚಿಸಿದ್ದನ್ನು ವರುಣ ದೇವನಿಗೂ ಕರುಳು ಚುರುಕ್ ಎಂದಿತೋ ಏನೋ! ಧೋ ಎಂದು ಮಳೆ ಸುರಿಸುವ ಮೂಲಕ ಸ್ವಾಗತಿಸಿದ.
ಮಳೆಯ ನಡುವೆಯೇ ದರ್ಶನ್ ಸಾರಥಿ ಮೆರವಣಿಗೆ ನಡೆಯಿತು. ಮಂಡ್ಯ ಸರ್ಕಲ್ನಿಂದ ಸಾರಥಿ ಚಿತ್ರ ಪ್ರದರ್ಶನ ಕಾಣುತ್ತಿರುವ ಮಹಾವೀರ್ ಚಿತ್ರಮಂದಿರದ ತನಕ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಲವತ್ತಕ್ಕೂ ಹೆಚ್ಚು ನಿಮಿಷಗಳ ಕಾಲ ದರ್ಶನ್ ಮಂಡ್ಯದಲ್ಲಿ ಕಳೆದದ್ದು ವಿಶೇಷ. ಮಂಡ್ಯದ ಅಭಿಮಾನಿಗಳಿಗೆ ನಾನು ಚಿರಋಣಿಯಾಗಿದ್ದೇನೆ. ಇನ್ನು ಮುಂದೆ ಯಾವತ್ತೂ ಪತ್ನಿ ಮೇಲೆ ಕೈ ಮಾಡುವುದಿಲ್ಲ ಎಂದು ಅವರು ಅಭಿಮಾನಿಗಳ ಕ್ಷಮೆಯಾಚಿಸಿದರು. ಅಭಿಮಾನಿಗಳ ಭರ್ಜರಿ ಸ್ವಾಗತ ಹಾಗೂ ಮಳೆಯ ನಡುವೆ ಸಾರಥಿ ರೋಡ್ ಶೋ ಮುನ್ನಡೆಯಿತು. (ಒನ್ಇಂಡಿಯಾ ಕನ್ನಡ)


Click it and Unblock the Notifications











