ರವಿಕಿರಣ್ ಮತ್ತು ಕಾವ್ಯಾ ಶಾಸ್ತ್ರಿ ತಿಕ್ಕಾಟ
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ರವಿಕಿರಣ್ ಒಳ್ಳೆ ಹೆಸರು ಮಾಡಿರುವ ಸೃಜನಶೀಲ ವ್ಯಕ್ತಿ. ಅವರ ಧಾರಾವಾಹಿ 'ಬದುಕು' ತುಂಬಾ ಸರಾಗವಾಗಿ ಸಾಗುತ್ತಿದೆ. ಆದರೆ, ಅದೇ ರವಿಕಿರಣ್ ವಿರುದ್ಧ ನಟಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಿದ್ದಾರೆ ಎಂದರೆ ನೀವು ನಂಬುತ್ತೀರಾ?ಇದು ಸತ್ಯ. ರವಿಕಿರಣ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ನಟಿಯ ಹೆಸರು ಕಾವ್ಯಾ ಶಾಸ್ತ್ರಿ.
ಈಕೆ ಕಿರುತೆರೆ ನಿರೂಪಕಿಯಾಗಿ ಹೆಸರು ಮಾಡಿದವರು. ದುನಿಯಾ ವಿಜಯ್ ಜೊತೆ 'ಯುಗ' ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ, ಚಿತ್ರರಂಗದಲ್ಲಿ ಅವರಿಗೆ ಹೆಸರು ಬರಲಿಲ್ಲ. ಅದೇ ಕಾವ್ಯಾ ಅವರನ್ನು ಹಾಕಿಕೊಂಡು ರವಿಕಿರಣ್ ಈಟಿವಿ ವಾಹಿನಿಗಾಗಿ ಸೀರಿಯಲ್ ಮಾಡಲು ಹೊರಟಿದ್ದರು. ಅವರನ್ನು ಹೀರೊಯಿನ್ ಆಗಿ ಮಾಡಿಕೊಂಡು 13 ಲಕ್ಷ ಖರ್ಚು ಮಾಡಿ, ಡಮ್ಮಿ ಎಪಿಸೋಡ್ ಕೂಡ ರೆಡಿ ಮಾಡಿದ್ದರು.
ಆದರೆ, ಅದು ಇನ್ನೇನು ಪೂರ್ಣಪ್ರಮಾಣವಾಗಿ ಶುರುವಾಗಬೇಕು ಎನ್ನುವ ಹೊತ್ತಿಗೆ ಕಾವ್ಯಾ ಕೈ ಕೊಟ್ಟಿದ್ದಾರೆ ಎನ್ನಲಾಗಿದೆ. ಆಗ ರವಿಕಿರಣ್ ಕೋಪಗೊಂಡು, ತಾನು ಖರ್ಚು ಮಾಡಿರುವ 13 ಲಕ್ಷ ವಾಪಸ್ ಕೊಡಬೇಕು ಎಂದು ಧಮಕಿ ಹಾಕಿ, ಕೇಸ್ ಕೂಡ ಹಾಕಿದ್ದಾರೆ.
ಅದಕ್ಕೆ ಪ್ರತಿಯಾಗಿ ಕಾವ್ಯಾ ಶಾಸ್ತ್ರಿ ತಮ್ಮ ವಕೀಲರ ಮುಖಾಂತರ ರವಿಕಿರಣ್ ನೀಡಿರುವ ನೋಟೀಸಿಗೆ ಉತ್ತರ ನೀಡಿದ್ದಾರೆ. ಈ ಕುರಿತು ದಟ್ಸ್ ಕನ್ನಡದೊಡನೆ ಮಾತನಾಡಿದ ಕಾವ್ಯಾ ಅವರು, ಇದರಲ್ಲಿ ನನ್ನದೇನೂ ತಪ್ಪಿಲ್ಲ. ಆದರೆ, ರವಿಕಿರಣ್ ಸೇರಿದಂತೆ ಅವರ ತಂಡದಲ್ಲಿನ ಕೆಲವರ ವರ್ತನೆ ಖಂಡಿತ 'ಆರೋಗ್ಯಕರ'ವಾಗಿಲ್ಲ ಎಂದು ಹೇಳಿದರು. ಅವರ ಈ 'ಅನಾರೋಗ್ಯಕರ' ವರ್ತನೆ ಸಹಿಸಲಾರದೆ ಧಾರಾವಾಹಿಯಿಂದ ಹೊರಬರಬೇಕಾಯಿತು ಎಂದು ಕಾವ್ಯಾ ತಮ್ಮನ್ನು ಸಮರ್ಥಿಸಿಕೊಂಡರು. ಈ ಸುದ್ದಿ ಇನ್ನೂ ಹೆಚ್ಚಿನವರಿಗೆ ಗೊತ್ತಿಲ್ಲ. ಗೊತ್ತಿಲ್ಲ ಎಂಬ ಮಾತ್ರಕ್ಕೆ ಅದು ಸುಳ್ಳಾಗಲು ಸಾಧ್ಯವಿಲ್ಲ!


Click it and Unblock the Notifications











