ಗಣೇಶಾ ಏನಿದು ನಿನ್ನ ಮಧುರ ಯಾತನೆ!?
ಕೆ.ಮಂಜು ನಿರ್ಮಾಣದ, ಹಾಸ್ಯ ನಟ ನಾಗಶೇಖರ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಹೊಚ್ಚಹೊಸ ಚಿತ್ರ 'ಅರಮನೆ' ಪ್ರೇಕ್ಷಕರಿಗೆ ಹಬ್ಬದೂಟವನ್ನೇ ಬಡಿಸಲಿದೆ.
ಅರಮನೆ ಚಿತ್ರದಲ್ಲಿ ಗಣೇಶ್ ಏಳು ಅವತಾರಗಳಲ್ಲಿ ಕಾಣಿಸಲಿದ್ದಾರೆ. ಪ್ರೇಮಿ, ಛಾಯಾಗ್ರಾಹಕ, ವಿದೂಷಕ, ರಾಜ್ ಕಪೂರ್, ಚಾರ್ಲಿ ಚಾಪ್ಲಿನ್ ಮತ್ತು ಅಪ್ಪು ರಾಜ ಪಾತ್ರಗಳಲ್ಲಿ ಬಣ್ಣ ಬಳಿದುಕೊಳ್ಳಲಿದ್ದಾರೆ(ಇನ್ನೊಂದು ಪಾತ್ರ ಯಾವುದು ಎಂದು ಗೊತ್ತಾಗಿಲ್ಲ!). ಅಪ್ಪುರಾಜ ಪಾತ್ರದ ಎರಡು ದಿನಗಳ ಚಿತ್ರೀಕರಣಕ್ಕಾಗಿ ಗಣೇಶ್ ಎರಡು ತಿಂಗಳಿಂದ ಕಠೋರವಾಗಿ ಅಭ್ಯಾಸ ಮಾಡಿದ್ದಾರೆ. ಅಪ್ಪುರಾಜನ ಕೊನೆ ದೃಶ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಬಂಧಿಸಿದ ಮೇಲೆ ಗಣೇಶ್ ಮಧುರ ಯಾತನೆಯಿಂದ ಹೊರಬಂದಿದ್ದಾರೆ.
ಅಪ್ಪು ರಾಜ ಚಿತ್ರದಲ್ಲಿ ಕಮಲ್ ಹಾಸನ್ ಮೂರುವರೆ ಅಡಿ ಎತ್ತರದ ವಿದೂಷಕನ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ರೀತಿಯ ಪಾತ್ರವನ್ನು ಗಣೇಶ್ ಮಾಡುತ್ತಿದ್ದಾರೆ. ಇದೊಂದು ರೀತಿ ಕಷ್ಟದ ಕೆಲಸ. ಕಾಲನ್ನು ಮಡಿಚಿ ಪ್ಯಾಕ್ ಮಾಡಿಕೊಂಡು ಮೊಣಕಾಲಿನ ಮೇಲೆ ನಡೆದಾಡಬೇಕು. ಹಾಡಿನ ಸನ್ನಿವೇಶದಲ್ಲಿ ಎರಡು ದಿನ ಮೊಣಕಾಲಿನ ಮೇಲೆ ನಡೆದು ಸುಸ್ತಾದಗಣೇಶ್ ಕೊನೆಯ ಶಾಟ್ನಲ್ಲಿ ಇನ್ನು ನನ್ನ ಕೈಲಿ ಆಗುವುದಿಲ್ಲ ಎಂದು ನೆಲದ ಮೇಲೆ ಬಿದ್ದು ಅತ್ತೇಬಿಟ್ಟರಂತೆ. ನಂತರ ಗಣೇಶ್ ಅವರನ್ನು ಪರೀಕ್ಷಿಸಿದ ವೈದ್ಯರ ತಂಡ ಎಲ್ಲಾ ಓಕೆ ಎಂದು ಹೇಳಿದೆ.
ಈ ಚಿತ್ರದ ಒಂದು ದೃಶ್ಯಕ್ಕಾಗಿ 35ಲಕ್ಷ ರೂ. ವೆಚ್ಚದಲ್ಲಿ ಸೆಟ್ ಹಾಕಲಾಗಿತ್ತು. ನಿರ್ಮಾಪಕ ಕೆ.ಮಂಜು ಅವರ 'ಅರಮನೆ' 18ನೇ ಚಿತ್ರ. ಅರಮನೆ ಏಪ್ರಿಲ್ 4,2008ರಂದು ಕರ್ನಾಟಕ ರಾಜ್ಯದಾದ್ಯಂತ ತೆರೆಕಾಣಲಿದೆ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications