ಶೈಲೂ ಚಿತ್ರದಲ್ಲಿ ಕವಿರಾಜ್ಗೆ ಚಾನ್ಸ್ ಕೊಟ್ಟ ನಾರಾಯಣ್
ತಮ್ಮ ಚಿತ್ರಗಳಿಗೆ ತಾವೇ ಸಾಹಿತ್ಯ ಹೆಣೆದುಕೊಳ್ಳುತ್ತಿದ್ದ ಕಲಾ ಸಾಮ್ರಾಟ್ ಎಸ್ ನಾರಾಯಣ್ ಇದೇ ಮೊದಲ ಬಾರಿಗೆ 'ಶೈಲೂ' ಚಿತ್ರದಲ್ಲಿ ಮತ್ತೊಬ್ಬರಿಗೆ ಅವಕಾಶ ಕೊಟ್ಟಿದ್ದಾರೆ. ಅವರು ಬೇರಾರು ಅಲ್ಲ ಇತ್ತೀಚೆಗೆ ಸಿಕ್ಕಾಪಟ್ಟೆ ಹಿಟ್ ಸಾಂಗ್ಗಳನ್ನು ನೀಡಿರುವ ಕವಿರಾಜ್. ಹಾಗೆಯೇ ನಾಗೇಂದ್ರ ಪ್ರಸಾದ್ ಅವರಿಗೂ ಅವಕಾಶ ಕೊಟ್ಟಿರುವುದು ವಿಶೇಷ.
'ಶೈಲೂ' ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಮತ್ತೊಮ್ಮೆ ಗಣೇಶ್ ಹಾಗೂ ಎಸ್ ನಾರಾಯಣ್ ಕೈಜೋಡಿಸಿದ್ದಾರೆ. ಈ ಹಿಂದೆ ಇದೇ ಜೋಡಿ 'ಚೆಲುವಿನ ಚಿತ್ತಾರ' ಬಿಡಿಸಿತ್ತು. ಕೆ ಮಂಜು ನಿರ್ಮಿಸುತ್ತಿರುವ 'ಶೈಲೂ' ಚಿತ್ರಕ್ಕೆ ಮಲಯಾಳಂ ಮತ್ತು ತಮಿಳು ಚಿತ್ರಗಳ ಬೆಡಗಿ ಸನುಷಾ ಸಂತೋಷ್ ನಾಯಕಿ.
ಜೆಸ್ಸಿ ಗಿಫ್ಟ್ ಸಂಗೀತವಿರುವ ಚಿತ್ರವನ್ನು ಮುನ್ನಾರ್, ಹಾಸನ, ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತದೆ. ಜಗದೀಶ್ ವಾಲಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ತಮಿಳಿನ ಸೂಪರ್ ಹಿಟ್ ಚಿತ್ರ 'ಮೈನಾ' ರೀಮೇಕ್ ಶೈಲೂ. ಸುರೇಶ್ ಚಂದ್ರ ಅವರು ಗಣೇಶ್ ಅವರ ತಂದೆಯಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ.
ನಾಲ್ಕು ವರ್ಷಗಳ ಗ್ಯಾಪ್ನ ಬಳಿಕ ಎಸ್ ನಾರಾಯಣ್ ಜೊತೆ ಅಭಿನಯಿಸುತ್ತಿರುವ ಬಗ್ಗೆ ಗಣೇಶ್ ಸಂತಸ ವ್ಯಕ್ತಪಡಿಸಿದ್ದಾರೆ. 'ಚೆಲುವಿನ ಚಿತ್ತಾರ' ಚಿತ್ರ ತಮಿಳಿನ ಕಾದಲ್ ಚಿತ್ರದ ರೀಮೇಕ್ ಆಗಿತ್ತು. ಈಗ ಶೈಲೂ ಚಿತ್ರವೂ ರೀಮೇಕ್. ಮತ್ತೊಮ್ಮೆ ಇಬ್ಬರೂ ಬಾಕ್ಸಾಫೀಸಲ್ಲಿ 'ಚೆಲುವಿನ ಚಿತ್ತಾರ' ಹಾಡುತ್ತಾರೋ ಏನೋ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











