ಇದೇ ಮೊದಲ ಬಾರಿಗೆ ಮನದೀಪ್ರಾಯ್ ಆಕ್ಷನ್, ಕಟ್
ಜೊತೆಗಾರ ಚಿತ್ರದ ನಂತರ ಅಶ್ವಿನಿ ಗ್ರೂಪ್ಸ್ ಕಳೆದುಹೋಗಿದೆಯಾ? ರಾಮ್ಪ್ರಸಾದ್ ಇನ್ನೂ ಸಾಲ ಮಾಡಿ ತುಪ್ಪ ತಿನ್ನುತ್ತಲೇ ಇದ್ದಾರಾ? ಮತ್ತೆ ಶಿವಣ್ಣನ ಚಿತ್ರ ಮಾಡುತ್ತಾರಾ?ಈ ಎಲ್ಲದಕ್ಕೂ ಉತ್ತರ ಮನದೀಪ್ ರಾಯ್. ಹೌದು, ರಾಮ್ಪ್ರಸಾದ್ ಸೋದರ ಪಚ್ಚಿ ಅಲಿಯಾಸ್ ಕೃಷ್ಣಪ್ರಜ್ವಲ್ ಈಗ ಮನದೀಪ್ ರಾಯ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ವರ್ಷದಿಂದ ಡಬ್ಬದಲ್ಲೇ ಕೂತಿದ್ದ ಜೊತೆಗಾರ ಚಿತ್ರವನ್ನು ಕಷ್ಟಪಟ್ಟು ಜನರಿಗೆ ತಲುಪಿಸಿದ್ದು ಇದೇ ಪಚ್ಚಿ. ರಾಮ್ ಎಲ್ಲೆಲ್ಲಿ ಹೆಸರು ಹಾಳುಮಾಡಿಕೊಂಡಿದ್ದಾರೋ ಅಲ್ಲೆಲ್ಲಾ ಹೋಗಿ ಪಚ್ಚಿ ಸಂಧಾನ ಮಾಡುತ್ತಾರೆ. ಸೋದರನ ಸಾಲಾದಿ ಮೂಲಗಳನ್ನು ತಿಕ್ಕಿ ತೊಳೆಯುವ ಕೆಲಸ ಮಾಡುತ್ತಲೇ ಇದ್ದಾರೆ.
ಅದೇ ಪಚ್ಚಿ ಈಗ ಅಶ್ವಿನಿ ಗ್ರೂಪ್ಸ್ ಬ್ಯಾನರ್ನಲ್ಲಿ ಹೊಸ ಚಿತ್ರ ಮಾಡುತ್ತಿದ್ದಾರೆ. ಶಂಕರನಾಗ್ ಅವರ ಪರ್ಮನೆಂಟ್ ಶಿಷ್ಯರಲ್ಲಿ ಒಬ್ಬರಾದ ಮನದೀಪ್ ರಾಯ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದು ಬ್ರೇಕಿಂಗ್ ನ್ಯೂಸ್.ಸಂಗೀತದ ಜವಾಬ್ದಾರಿಯನ್ನು ಎಲ್.ಎನ್.ಶಾಸ್ತ್ರಿ ಅವರಿಗೆ ವಹಿಸಿದ್ದಾರೆ ಮನದೀಪ್ರಾಯ್.
'ಬಳ್ಳಾರಿ ನಾಗ' ನಂತರ ಶಾಸ್ತ್ರಿ ಮತ್ತೊಮ್ಮೆ ಬ್ಯಾಂಗ್ ರೂಪದಲ್ಲಿ ಹೊರಹೊಮ್ಮಲಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಮೊದಲ ಬಾರಿಗೆ ಮನದೀಪ್ ಕ್ಯಾಮೆರಾ ಹಿಡಿಯುತ್ತಿರುವುದು ವಿಶೇಷಗಳಲ್ಲಿ ವಿಶೇಷ. ಅಜಯ್ರಾವ್, ಕೋಮಲ್ ಮತ್ತು ಶರಣ್ ಈ ಚಿತ್ರದ ನಾಯಕರು. ಅಂದಮೇಲೆ ಸೆಂಟ್ ಪರ್ಸೆಂಟ್ ಮನರಂಜನೆಯ ಚಿತ್ರ ಎಂದು ಮತ್ತೆ ಹೇಳಬೇಕಿಲ್ಲ! (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











