ಅನಂತದೇಗುಲದ ಏಕೈಕ ಸಿನಿಮಾ 1933ರಲ್ಲೇ ಸಿದ್ಧ

'ಮಾರ್ತಾಂಡ ವರ್ಮ' ಹೆಸರಿನ ಈ ಮೂಕಿ ಚಿತ್ರ ತಿರುವಾಂಕೂರು ರಾಜರಲ್ಲೇ ಪ್ರಸಿದ್ಧನಾದ ತಿರುನಾಳ್ ಮಾರ್ತಾಂಡ ವರ್ಮ (1706-1758) ಬಗ್ಗೆ ಬೆಳಕು ಚೆಲ್ಲುತ್ತದೆ. 1930 ರಲ್ಲಿ ಪದ್ಮನಾಭ ಸ್ವಾಮಿ ದೇಗುಲದ ವೈಭವದ 'ಆರಾಟ್ಟು ಉತ್ಸವ'ದ ನೈಜ ಚಿತ್ರೀಕರಣವನ್ನೂ ಇದು ಒಳಗೊಂಡಿದ್ದು, ರಾಜಮನೆತನ, ದೇಗುಲದ ಪದ್ಧತಿ, ಸಂಪ್ರದಾಯ, ವೈಭವಗಳ ಬಗ್ಗೆ ಹೇಳುವ ಏಕೈಕ ಚಲನಚಿತ್ರ ಇದಾಗಿದೆ.
ರಾಜಮನೆತನದ ಆಳ್ವಿಕೆ, ಅಧಿಕಾರ ಉಳಿಸಿಕೊಳ್ಳುವ ಹೋರಾಟಗಳ ಬಗ್ಗೆ ಸುಂದರ ನಿರೂಪಣೆ ಮತ್ತು ಪಾತ್ರಗಳ ಪ್ರಖರತೆಯಿಂದಾಗಿ ಚಿತ್ರ ಕೊನೆವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಲ್ಲದೇ 18 ಶತಮಾನದ ಸಮರ ಕಲೆ ಮತ್ತು ಜನರ ಸಂಪ್ರದಾಯ ಇದು ಸವಿವರವಾಗಿ ಮಾಹಿತಿ ನೀಡುತ್ತದೆ ಎಂದು ಹವ್ಯಾಸಿ ಸಿನೆಮಾ ಇತಿಹಾಸಕಾರ ಬಾಲಗೋಪಾಲನ್ ಹೇಳುತ್ತಾರೆ.
1933ರಲ್ಲಿ ಹಿರಿಯ ನಿರ್ದೇಶಕ ಪಿ.ವಿ. ರಾವ್ ಈ ಚಿತ್ರವನ್ನು ನಿರ್ಮಿಸಿದ್ದರು. 1891ರಲ್ಲಿ ಸಿ.ವಿ.ರಾಮನ್ ಪಿಳ್ಳೆ ಎಂಬವರು ಬರೆದಿದ್ದ ಮಲಯಾಳಂ ಕಾದಂಬರಿ ಆಧಾರಿತ ಈ ಚಿತ್ರ ನಿರ್ಮಾಣಗೊಂಡಿದೆ ಎನ್ನಲಾಗಿತ್ತು. ಚಿತ್ರದ ಹೆಸರಿನ ಕುರಿತಂತೆ ಕಾದಂಬರಿಯ ಪ್ರಕಾಶಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ಚಿತ್ರ ಬಿಡುಗಡೆಯಾಗದೇ ನೆನೆಗುದಿಗೆ ಬಿದ್ದಿತ್ತು.
1947ರಲ್ಲಿ ರಾಷ್ಟ್ರೀಯ ಸಿನೆಮಾ ಸಂಗ್ರಹಾಗಾರದ ನಿರ್ವಾಹರ ಪಿ.ಕೆ. ನಾಯರ್ ಅವರು ಈ ಚಿತ್ರದ ಏಕೈಕ ಪ್ರಿಂಟನ್ನು ಶೋಧಿಸಿದ್ದು, ಪುಣೆ ಚಿತ್ರ ಸಂಗ್ರಹಾಗಾರದಲ್ಲಿ ಇಡಲಾಗಿದೆ. ಚಿತ್ರದ ಕೆಲ ಭಾಗ ಹಾಳಾಗಿದ್ದರೂ ಚಿತ್ರವನ್ನು ಡಿವಿಡಿ ಆವೃತ್ತಿಗೆ ತರಲಾಗಿದೆ. ಎರಡು ತಿಂಗಳ ಹಿಂದೆ ನಡೆದ ಫಿಲಿಕಾ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶಿಸಲಾಗಿದೆ ಎಂದು ಪಿ.ಕೆ. ನಾಯರ್ ಹೇಳಿದ್ದಾರೆ.


Click it and Unblock the Notifications











