ರಹಸ್ಯ ಸಿನಿಮಾದಲ್ಲಿ ಆರುಷಿ- ಹೇಮರಾಜ್ ಹತ್ಯಾಕಾಂಡ
ಮುಂಬೈ, ನ.25-'ಮರ್ಯಾದಾ ಹತ್ಯೆ'ಗಾಗಿ ಹೆತ್ತವರಿಂದಲೇ ಹತಳಾದ ಹದಿಹರಯದ ಬಾಲಕಿಯ ಕಥಾನಕ ಸಿನಿಮಾದಲ್ಲಿ ರೂಪಾಂತರವಾಗಲಿದೆ. ಅಂದರೆ ಆರುಷಿ ಮತ್ತು ಆಕೆಯ ಪ್ರಿಯಕರ 45 ವರ್ಷದ ಹೇಮರಾಜ್ ಹತ್ಯಾ ಪ್ರಸಂಗದ ಬಗ್ಗೆ ಬಾಲಿವುಡ್ ನಿರ್ಮಾಪಕ ಮನೀಷ್ ಗುಪ್ತಾ ಸಿನಿಮಾ ಮಾಡಲಿದ್ದಾರೆ.
ಚಿತ್ರದ ಹೆಸರು 'ರಹಸ್ಯ'. ಬಾಲ ಕಲಾವಿದೆ ಸಾಕ್ಷಿ ಸೇಮ್ (ಕೆಳಗಿನ ಚಿತ್ರ) ಆರುಷಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಖ್ಯಾತ ನಟ ಆಶೀಷ್ ವಿದ್ಯಾರ್ಥಿ ಮತ್ತು ತೀಸ್ಕಾ ಛೋಪ್ರಾ ದುರಂತ ದಂಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ನಗರಗಳಲ್ಲಿ ಹದಿಹರೆಯದ ಹುಡುಗಿಯರು ಅನುಭವಿಸುವ ವೈಯಕ್ತಿಕ ಯಾತನೆಗಳು, ಪ್ರೀತಿ-ಪ್ರೇಮ, ಅಪ್ಪ-ಅಮ್ಮ ಜತೆಗೆ ಬಿಗಡಾಯಿಸುವ ಸಂಬಂಧಗಳನ್ನು ಮನಮುಟ್ಟುವಂತೆ ಚಿತ್ರದಲ್ಲಿ ಬಿಡಿಸಿಡುವೆ ಎನ್ನುತ್ತಾರೆ ಮನೀಷ್.

ರಾಮ್ ಗೋಪಾಲ್ ವರ್ಮಾ ನಿರ್ಮಾಣದ 'ಡರನಾ ಜರೂರಿ ಹೈ' ಚಿತ್ರದಲ್ಲಿ 18 ವರ್ಷದ ಸಾಕ್ಷಿ ಸೇಮ್ 10 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದಳು. ಮನೀಷ್ ಗುಪ್ತಾರ ಮೊದಲ ಚಿತ್ರ ಅದಾಗಿತ್ತು. ಅಜಯ್ ದೇವಗನ್ ತಾರಾಗಣದ 'ರಾಜೂ ಚಾಚಾ'ದಲ್ಲಿಯೂ ಸಾಕ್ಷಿ ಕಾಣಿಸಿಕೊಂಡಿದ್ದಳು.
ಇತ್ತೀಚೆಗೆ ನಮ್ಮ ಕಾಲೇಜಿಗೆ ಬಂದಿದ್ದ ನಿರ್ಮಾಪಕ ಮನೀಷ್, ತಾನು ಆರುಷಿ ಬಗ್ಗೆ ಸಿನಿಮಾ ಮಾಡುತ್ತಿರುವುದಾಗಿಯೂ ಮತ್ತು ಆ ಪಾತ್ರಕ್ಕೆ ನನ್ನನ್ನೇ ಆಯ್ಕೆ ಮಾಡಿರುವುದಾಗಿಯೂ ತಿಳಿಸಿದರು. ಆರುಷಿ ಪ್ರಕರಣ ನನಗೆ ಗೊತ್ತಿತ್ತು. ಹಾಗಾಗಿ ನಾನು ತಕ್ಷಣ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಈ ಮಧ್ಯೆ, ಪ್ರಕರಣವನ್ನು ಕೂಲಂಕಷವಾಗಿ ಅಧ್ಯಯನ ಮಾಡಿರುವೆ. ಆರುಷಿ ನಿಜಕ್ಕೂ ಮುಗ್ಧ ಹುಡುಗಿ ಎಂದು ಸಾಕ್ಷಿ 'ರಹಸ್ಯ' ಸಿನಿಮಾದ ಬಗ್ಗೆ ಮಾತನಾಡಿದ್ದಾಳೆ.


Click it and Unblock the Notifications










