ಸುಮನಾ ಕಿತ್ತೂರು ನಿರ್ದೇಶನದಲ್ಲಿ ಕಿಶೋರ್
ಈಗಾಗಲೆ ತಮ್ಮ ಎರಡು ಚಿತ್ರಗಳ ಮೂಲಕ ಗಮನಸೆಳೆದ ನಿರ್ದೇಶಕಿ ಸುಮನಾ ಕಿತ್ತೂರು. ಈಗವರು ಮತ್ತೊಂದು ಕಾದಂಬರಿ ಆಧಾರಿತ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪತ್ರಕರ್ತ ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ' ಕಾದಂಬರಿ ಬೆಳ್ಳಿತೆರೆಗೆ ತರಲಿದ್ದಾರೆ ಸುಮನಾ ಕಿತ್ತೂರು.
ಭೂಗತ ಜಗತ್ತಿನ ಕಥಾಹಂದರವನ್ನು 'ಎದೆಗಾರಿಕೆ' ಒಳಗೊಂಡಿದ್ದು, ಸುಪಾರಿ ಕಿಲ್ಲರ್ ಒಬ್ಬನ ಸುತ್ತ ಕತೆ ಸುತ್ತುತ್ತದೆ. ಇದೊಂದು ಭೂಗತ ಕಥಾಹಂದರದ ಕಾದಂಬರಿಯಾದರೂ ಅಗ್ನಿ ಶ್ರೀಧರ್ ಅವರ ಬರವಣಿಗೆ ಶೈಲಿ ಹೆಜ್ಜೆಹೆಜ್ಜೆಗೂ ಕುತೂಹಲ ಮೂಡಿಸುವಂತಿದೆ.
ಈ ಹಿಂದೆ ಸುಮನಾ ಕಿತ್ತೂರು ಅವರು 'ಕಳ್ಳರ ಸಂತೆ' ಮತ್ತು 'ಸ್ಲಂಬಾಲ' ಚಿತ್ರಗಳಿಗೆ ಆಕ್ಷನ್, ಕಟ್ ಹೇಳಿದ್ದರು. 'ಎದೆಗಾರಿ'ಗೆ ಅವರು ನಿರ್ದೇಶಿಸಲಿರುವ ಮೂರನೆ ಚಿತ್ರ. ಮೊದಲು ಚಿತ್ರಕತೆಯನ್ನು ಸೆನ್ಸಾರ್ಗೆ ತೋರಿಸಿ ಮತ್ತೆ ಚಿತ್ರೀಕರಣ ಆರಂಭಿಸುವುದಾಗಿ ಸುಮನಾ ಕಿತ್ತೂರು ತಿಳಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಕ್ಕೆ ಕಿಶೋರ್ ಅವರನ್ನು ಸುಮನಾ ಆಯ್ಕೆ ಮಾಡಿದ್ದಾರೆ.
ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ, ಪೋಷಕ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಸುಪಾರಿ ಕಿಲ್ಲರ್ ಒಬ್ಬನಿಗೆ ಮುಂಚಿತವಾಗಿಯೇ ತನ್ನನ್ನು ಹತ್ಯೆ ಮಾಡುವ ವಿಚಾರ ಗೊತ್ತಾಗುತ್ತದೆ. ಇಲ್ಲಿ ಅವನ ಮನಸ್ಥಿತಿಯನ್ನು ಅಗ್ನಿ ಶ್ರೀಧರ್ ತನ್ನ ಕತೆಯ ಮೂಲಕ ಬಿಚ್ಚಿಡುತ್ತಾ ಹೋಗುತ್ತಾರೆ.


Click it and Unblock the Notifications











