ನಟ ಅನಂತ್ ನಾಗ್ ಕೊಲೆಗೆ ಯತ್ನ; ಕಹಿ ಘಟನೆಗೆ 25 ವರ್ಷ
ಮಾರ್ಚ್ 14, 1996 ಚಂದನವನದ ಖ್ಯಾತ ನಟ ಅನಂತ್ ನಾಗ್ ಜೀವನದಲ್ಲಿ ಮರೆಯಲಾಗದ ದಿನ. ಈ ದಿನ ನಡೆದ ಕೆಟ್ಟ ಘಟನೆ ಅವರ ಮನಸ್ಸಿನಲ್ಲಿ ಇನ್ನೂ ಹಾಗೆ ಉಳಿದಿದೆ. ಇಂದಿನ ಸರಿಯಾಗಿ ಅಂದರೆ 25 ವರ್ಷಗಳ ಹಿಂದೆ ಅನಂತ್ ಮೇಲೆ ಕೊಲೆ ಪ್ರಯತ್ನ ನಡೆದಿತ್ತು.
Recommended Video
ಚಂದನವನದ ಸುಂದರ ನಟನ ಮೇಲೆ ನಡೆದ ದಾಳಿ ಇಡೀ ಚಿತ್ರತಂಡವನ್ನೇ ಬೆಚ್ಚಿಬೀಳಿಸಿತ್ತು. ಅಂದು ಬೆಳಗ್ಗೆ ಎಂದಿನಂತೆ ತನ್ನ ಮಗಳು ಅದಿತಿಯನ್ನು ಶಾಲೆಗೆ ಕರೆದುಕೊಂಡು ಹೋಗಲು ಕಾರು ಹತ್ತಿ ಹೊರಟ ಅನಂತ್ ನಾಗ್ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಪಕ್ಕದಲ್ಲಿ ಮಗಳು ಸಹ ಕುಳಿತಿದ್ದಳು. ಈ ಘಟನೆ ಬೆಂಗಳೂರಿನ ಮಲ್ಲೇಶ್ವರದ ಅನಂತ್ ನಾಗ್ ಅವರ ನಿವಾಸದ ಸಮೀಪದಲ್ಲೇ ನಡೆದಿತ್ತು. ಮುಂದೆ ಓದಿ..

ಶಾಸಕರಾಗಿದ್ದ ಅನಂತ್ ನಾಗ್
ಆಗಲೇ ಅನಂತ್ ನಾಗ್ ಸಿನಿಮಾರಂಗದಿಂದ ರಾಜಕೀಯಕ್ಕೆ ರಂಗಕ್ಕೆ ಪ್ರವೇಶ ಮಾಡಿದ್ದರು. ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದರು. ಶಾಸಕರಾಗಿದ್ದ ಅನಂತ್ ನಾಗ್ ಅವರನ್ನು ಹುಸಿಬಾಂಬ್ ಸ್ಫೋಟಿಸಿ ಕೊಲ್ಲುವ ಪ್ರಯತ್ನ ಮಾಡಲಾಗಿತ್ತು. ಆದರೆ ಕಿಡಿಗೇಡಿಗಳ ಪ್ರಯತ್ನ ವಿಫಲವಾಗಿತ್ತು.

ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ಅನಂತ್ ನಾಗ್
ಸ್ವಲ್ಪದರಲ್ಲೇ ಪಾರಾಗಿದ್ದ ಅನಂತ್ ನಾಗ್ ಆರೋಪಿಗಳನ್ನು ಸಿನಿಮೀಯ ರೀತಿಯರಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮಗಳನ್ನು ಶಾಲೆಗೆ ಬಿಡಲು ಕಾರಿನಲ್ಲಿ ಹೊರಟ ಅನಂತ್ ಕಾರನ್ನು ಅಡ್ಡಗಟ್ಟಿ ಇಬ್ಬರು ದುಷ್ಕರ್ಮಿಗಳು ದಾಳಿಗೆ ಮುಂದಾಗಿದ್ದರು. ಕೈಯಲ್ಲಿ ಚಾಕು ಮತ್ತು ನಾಡ ಬಾಂಬ್ ಹಿಡಿದುಕೊಂಡಿದ್ದ ಆರೋಪಿಗಳು ಕಾರನ್ನು ತಡೆದು ದಾಳಿ ಮಾಡಲು ಪ್ರಯತ್ನಿಸುತ್ತಿದ್ದಂತೆ ಅನಂತ್ ನಾಗ್ ತಕ್ಷಣ ಆರೋಪಿಯ ಮೇಲೆ ಎಗರಿ ಒಬ್ಬನನ್ನು ಹಿಡಿಯುತ್ತಾರೆ. ತಪ್ಪಿಸಿಕೊಂಡು ಓಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಸಹ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.

ಈ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?
ಈ ಘಟನೆ ಬಗ್ಗೆ ಅನಂತ್ ನಾಗ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದಾರೆ. 'ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿರುವಾಗ ಕಾರಲ್ಲಿ ಇದ್ದೆ, ಇಬ್ಬರು ಹುಡುಗರು ಕೈಯಲ್ಲಿ ಚಾಕು, ನಾಡಬಾಂಬ್ ಹಿಡಿದುಕೊಂಡಿದ್ದರು. ನನ್ನ ಕಾರನ್ನು ಹೈಜಾಕ್ ಮಾಡುವುದು ಅವರ ಉದ್ದೇಶವಾಗಿತ್ತು. ನನ್ನ ಮನೆಯ ಮುಂಭಾಗದಲ್ಲೇ ನಡೆದ ಘಟನೆ, ಒಬ್ಬನ್ನನ್ನು ಅಲ್ಲೇ ಹಿಡಿದು, ಹೊಡೆದು ಹಾಕಿದೆ. ಇನ್ನೊಬ್ಬನನ್ನು ಚೇಸ್ ಮಾಡಿ ಹಿಡಿದೆ' ಎಂದು ಹೇಳಿದ್ದಾರೆ.

ಆ ಘಟನೆ ಇನ್ನೂ ತಲೆಯಲ್ಲಿ ಕೂತಿದೆ
'ಆ ಘಟನೆ ಇನ್ನೂ ತಲೆಯಲ್ಲಿ ಕುಳಿತಿದೆ, ಹಾಗಾಗಿ ಮಗಳನ್ನು ತುಂಬಾ ಕಾಳಜಿ ಮತ್ತು ರಕ್ಷಣೆಯಿಂದ ಬೆಳೆಸಿದ್ದು. ಯಾವಾಗಲೂ ಮಗಳಿಗೆ ಫೋನ್ ಮಾಡುತ್ತಲೇ ಇರುತ್ತೇನೆ. ಅದೇ ಅಭ್ಯಾಸ ಈಗಲೂ ಮುಂದುವರೆದುಕೊಂಡು ಬಂದಿದೆ. ಈಗಲೂ ಸಹ ಅಷ್ಟೆ ಬಾರಿ ಫೋನ್ ಮಾಡಿ ಮಾತನಾಡುತ್ತಿರುತ್ತೇನೆ' ಎಂದು ಕಹಿ ಘಟನೆ ಬಗ್ಗೆ ವಿವರಿಸಿದ್ದಾರೆ.


Click it and Unblock the Notifications











