ಅಣ್ಣಾವ್ರ 'ದಾದಾ ಸಾಹೇಬ್ ಫಾಲ್ಕೆ'ಗೆ 25 ವರ್ಷದ ಸಂಭ್ರಮ: 1996ರ ಆ ಕ್ಷಣ ಹೇಗಿತ್ತು?
'ದಾದಾ ಸಾಹೇಬ್ ಫಾಲ್ಕೆ' ದೇಶದ ಅತ್ಯುನ್ನತ ಗೌರವ. ಪ್ರತಿ ವರ್ಷ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಸಾಧಕರೊಬ್ಬರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಗುರುತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡುತ್ತದೆ. ಈ ಪ್ರಶಸ್ತಿ ಪುರಸ್ಕೃತರಿಗೆ ಒಂದು ಲಕ್ಷ ನಗದು ಬಹುಮಾನ, ಸ್ವರ್ಣ ಪದಕ ವಿತರಿಸಲಾಗುವುದು.
Recommended Video
1969ರಲ್ಲಿ ಮೊಟ್ಟ ಮೊದಲ ಸಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಇದುವರೆಗೂ 51 ಜನ ಸಾಧಕರಿಗೆ ಈ ಗೌರವ ಲಭಿಸಿದೆ. ವಿಶೇಷ ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಈ ಗೌರವ ಪಡೆದ ಏಕೈಕ ಸಾಧಕ ಡಾ ರಾಜ್ ಕುಮಾರ್.
ವರನಟ ರಾಜ್ ಕುಮಾರ್ ಅವರಿಗೆ 1996ರಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಆಗಸ್ಟ್ 6, 1996ರಂದು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಅವರಿಂದ ಬಂಗಾರದ ಮನುಷ್ಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅತ್ಯುನ್ನತ ಗೌರವಕ್ಕೆ ಈಗ 25 ವರ್ಷ. ಅಣ್ಣಾವ್ರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪಡೆದ ಕ್ಷಣಕ್ಕೆ ಬೆಳ್ಳಿ ಸಂಭ್ರಮ. ಮುಂದೆ ಓದಿ...

ಎಚ್ಡಿ ದೇವೇಗೌಡ ಪ್ರಧಾನಿಯಾಗಿದ್ದರು
1996ರಲ್ಲಿ ಕರ್ನಾಟದ ಎಚ್ಡಿ ದೇವೇಗೌಡ ಭಾರತದ ಪ್ರಧಾನಮಂತ್ರಿಯಾಗಿದ್ದರು. ಶಂಕರ್ ದಯಾಳ್ ಶರ್ಮ ರಾಷ್ಟ್ರಪತಿಯಾಗಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ 27ನೇ ಸಾಧಕ ಡಾ ರಾಜ್ ಕುಮಾರ್. ಅದಕ್ಕೂ ಮುಂಚೆ ಕೆಲವೇ ಕೆಲವು ದಕ್ಷಿಣ ಭಾರತೀಯರಿಗೆ ಈ ಗೌರವ ಸಿಕ್ಕಿತ್ತು. ಹೆಚ್ಚಾಗಿ ಹಿಂದಿ ಕಲಾವಿದ-ತಂತ್ರಜ್ಞರಿಗೆ ಮಾತ್ರ ಈ ಪ್ರಶಸ್ತಿ ಹತ್ತಿರವಾಗಿತ್ತು.

'ದೇವಿಕಾ ರಾಣಿ' ಮೊದಲ ಪ್ರಶಸ್ತಿ ಪುರಸ್ಕೃತೆ
17ನೇ ವರ್ಷದ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊದಲ ಸಲ ದಾದಾ ಸಾಹೇಬ್ ಫಾಲ್ಕೆ ಗೌರವ ನೀಡಲು ಆರಂಭಿಸಲಾಯಿತು. ಭಾರತೀಯ ಚಿತ್ರರಂಗದ ಮೊದಲ ನಾಯಕಿನಟಿ ದೇವಿಕಾ ರಾಣಿಗೆ ಮೊಟ್ಟ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಕೇವಲ ಹತ್ತು ವರ್ಷ ಮಾತ್ರ ಇಂಡಸ್ಟ್ರಿಯಲ್ಲಿದ್ದರೂ, ಅದ್ಭುತವಾದ ನಟನೆ, ಸಿನಿಮಾ ನಿರ್ಮಾಣ ಹೀಗೆ ಚಿತ್ರರಂಗದಲ್ಲಿ ಹೆಸರು ಗಳಿಸಿದವರು. 1930 ರಿಂದ 40 ಕಾಲಘಟ್ಟದಲ್ಲಿ ದೇವಿಕಾ ರಾಣಿ ಯಶಸ್ವಿ ನಟಿಯಾಗಿದ್ದರು. ಸಿನಿಮಾ ಮೇಕರ್ ಹಿಮಾಂಶು ರೈ ಅವರ ಜೊತೆ ಮದುವೆಯಾಗಿದ್ದ ದೇವಿಕಾ ರಾಣಿ ನಂತರ ಪತಿಯ ಜೊತೆ ಸಿನಿಮಾ ಕೆಲಸಗಳಲ್ಲು ಭಾಗಿಯಾದರು. ಹಿಮಾಂಶು ರೈ ಅವರ ಸೈಲೆಂಟ್ ಸಿನಿಮಾಗಳಲ್ಲಿ ಕಾಸ್ಟ್ಯೂಮ್ ಡಿಸೈನ್, ಆರ್ಟ್ ಡೈರೆಕ್ಷನ್ ವಿಭಾಗದಲ್ಲಿ ದೇವಿಕಾ ಕೆಲಸ ಮಾಡಿದ್ದರು.

ದುಂಡಿರಾಜ್ ಗೋವಿಂದ್ ಫಾಲ್ಕೆ ಹೆಸರಿನಲ್ಲಿ ಪ್ರಶಸ್ತಿ
ದುಂಡಿರಾಜ್ ಗೋವಿಂದ್ ಫಾಲ್ಕೆ (ದಾದಾ ಸಾಹೇಬ್ ಫಾಲ್ಕೆ) 1913ರಲ್ಲಿ ಮೊದಲ ಬಾರಿಗೆ 'ರಾಜಾ ಹರಿಶ್ಚಂದ್ರ' ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿದರು. ಇದುವೇ ಭಾರತದ ಮೊಟ್ಟ ಮೊದಲ ಸಿನಿಮಾ ಎನಿಸಿಕೊಂಡಿತು. ಭಾರತೀಯ ಚಿತ್ರರಂಗಕ್ಕೆ ಅಡಿಪಾಯ ಹಾಕಿ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದ್ದ ದುಂಡಿರಾಜ್ ಗೋವಿಂದ್ ಫಾಲ್ಕೆ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯೇ 'ದಾದಾ ಸಾಹೇಬ್ ಫಾಲ್ಕೆ'

ಕೊನೆಯದಾಗಿ ರಜನಿಕಾಂತ್
2019ನೇ ಸಾಲಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಯಿತು. ರಜನಿ ಈ ಪ್ರಶಸ್ತಿ ಸ್ವೀಕರಿಸಿದ 51ನೇ ಸಾಧಕ. ದಕ್ಷಿಣ ಚಿತ್ರರಂಗದಲ್ಲಿ ಈ ಪ್ರಶಸ್ತಿ ಪಡೆದವರು ಬಹಳ ಕಡಿಮೆ. ಬಿಎನ್ ರೆಡ್ಡಿ, ಪೈದಿ ಜಯರಾಜ್, ಎಲ್ ವಿ ಪ್ರಸಾದ್, ಬಿ ನಾಗಿರೆಡ್ಡಿ, ಅಕ್ಕಿನೇನಿ ನಾಗೇಶ್ವರ ರಾವ್, ರಾಜ್ ಕುಮಾರ್, ಅಡೂರು ಗೋಪಾಲಕೃಷ್ಣ, ವಿಕೆ ಮೂರ್ತಿ, ಕೆ ಬಾಲಚಂದಿರ್, ಕೆ ವಿಶ್ವನಾಥ್ ಹಾಗೂ ರಜನಿಕಾಂತ್ಗೆ ಮಾತ್ರ ಈ ಗೌರವ ಲಭಿಸಿದೆ.


Click it and Unblock the Notifications











