ಹೊಸತು:‘ಪೂರ್ವಾಪರ’ ಮತ್ತು ‘ವೈ2ಕೆ’
ಎಡಕಲ್ಲು ಗುಡ್ಡದ ಮೇಲೆ" ಚಿತ್ರದ ಖ್ಯಾತಿಯ ಚಂದ್ರಶೇಖರ್ ನಿರ್ಮಾಣದ 'ಪೂರ್ವಾಪರ" ಹಾಗೂ ಹೃದಯಗಳ ಹುಚ್ಚುತನ ಎನ್ನುವ ಕಿಕ್ಕರ್ನ 'ವೈ2ಕೆ" ಚಿತ್ರ ಮಾ.26ರ ಶುಕ್ರವಾರ ತೆರೆ ಕಾಣಲಿವೆ.
'ಪೂರ್ವಾಪರ" ಎಂ.ಕೆ.ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರ. ಕಾದಂಬರಿ ಆಧಾರಿತ ಚಿತ್ರಗಳು ಅಪರೂಪವಾಗುತ್ತಿರುವ ದಿನಗಳಲ್ಲಿ 'ಪೂರ್ವಾಪರ" ತೆರೆ ಕಾಣುತ್ತಿರುವುದು ವಿಶೇಷ. ಎಡಕಲ್ಲು ಗುಡ್ಡದ ಚಂದ್ರಶೇಖರ್, ಗೀತಾ, ಲಕ್ಷ್ಮಿ ಗೋಪಾಲಸ್ವಾಮಿ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಜಯಂತ ಕಾಯ್ಕಿಣಿ ಸಂಭಾಷಣೆ ಚಿತ್ರದ ಇನ್ನೊಂದು ವಿಶೇಷ.
ಚಂದ್ರಶೇಖರ್ ಸದ್ಯಕ್ಕೆ ಕೆನಡ ವಾಸಿ. ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗದಿಂದ ನಾಪತ್ತೆಯಾಗಿದ್ದ ಚಂದ್ರು 'ಪೂರ್ವಾಪರ"ದ ಮೂಲಕ ಮರಳಿ ಗಾಂಧಿನಗರಕ್ಕೆ ಬರುತ್ತಿದ್ದಾರೆ. ನಿರ್ಮಾಣ-ನಟನೆಯಾಂದಿಗೆ ನಿರ್ದೇಶನದ ಸೂತ್ರಧಾರವೂ ಚಂದ್ರು ಅವರದೇ. ಅವರಿಗೆ ಆಲ್ ದ ಬೆಸ್ಟ್ .
'ವೈ2ಕೆ" ತನ್ನ ಟೈಟಲ್ನಿಂದಲೇ ಚಿತ್ರರಸಿಕರ ಗಮನ ಸೆಳೆದಿದೆ. ಕೋಲಾರ ಕುಮಾರ್ಸ ಮಂಜುನಾಥ ರೆಡ್ಡಿ ಮತ್ತು ಭೂಪಾಲ ರೆಡ್ಡಿ 'ವೈ2ಕೆ" ಚಿತ್ರದ ನಿರ್ಮಾಪಕರ ಪಟ್ಟಿಯಲ್ಲಿದ್ದಾರೆ. ಈ ಪೈಕಿ ಕೋಲಾರ ಕುಮಾರ್ ನಟ ಉಪೇಂದ್ರರ ಕಟ್ಟಾ ಅಭಿಮಾನಿ. ಉಪೇಂದ್ರರ 'ಎಚ್ಟುಓ" ಟೈಟಲ್ನಿಂದ ಪ್ರೇರಿತರಾಗಿರುವ ಕುಮಾರ್ ತಮ್ಮ ಚಿತ್ರಕ್ಕೆ 'ವೈ2ಕೆ" ಎಂದು ಹೆಸರಿಟ್ಟಿದ್ದಾರೆ.
'ವೈ2ಕೆ" ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಕೂಡ ಕೋಲಾರ ಕುಮಾರ್ ಉಪೇಂದ್ರರನ್ನು ಕರೆದಿದ್ದರು. ಮಾರ್ಚ್ 26ರ ಶುಕ್ರವಾರ 'ವೈ2ಕೆ" ಬಿಡುಗಡೆಯಾಗುತ್ತಿದೆ. ಹೊಸ ತಲೆಮಾರಿನವರಿಗಾಗಿ ಈ ಚಿತ್ರ ತಯಾರಾಗಿದೆಯಂತೆ. ಹೊಸ ತಲೆಮಾರಿನವರು ಮೆಚ್ಚಿದರೂ ಚಿತ್ರ ಗೆಲ್ಲುವುದು ಗ್ಯಾರಂಟಿ.
ವೇಣುರವರ ಛಾಯಾಗ್ರಹಣ, ಸಾಧು ಕೋಕಿಲ ಸಂಗೀತ, ಶಶಿಕುಮಾರರ ಸಂಕಲನ ಸೇರಿ 'ವೈಟುಕೆ "ಬರುತ್ತಿದೆ. ತಾರಾಗಣದಲ್ಲಿ ನಾಗೇಂದ್ರ ಪ್ರಸಾದ್, ಮಿತಿಷಾ ಶರ್ಮ, ಸಾಧು ಕೋಕಿಲ, ಆದಿತ್ಯ, ಚಿತ್ರಾ ಶೆಣೈ, ಅಯ್ಯಪ್ಪ, ಭರತ್ ಭಾಗವತರ್, ಮಿಮಿಕ್ರಿ ದಯಾನಂದ್ ಮುಂತಾದವರಿದ್ದಾರೆ.


Click it and Unblock the Notifications