ವರ್ಷಗಳ ಹಿಂದೆ ನಾನು ಮೆರೆದೆ - ಹಂಸ್
ಹಂಸಲೇಖಾರ ಸ್ಥಾನಕ್ಕೀಗ ಗುರುಕಿರಣ್ ಬಂದು ಕೂತಿದ್ದಾರೆ. ಗಾಂಧಿನಗರದ ಮಂದಿ ಇಂಥದೊಂದು ವಟವಟ ಶುರುವಿಡುವ ಹೊತ್ತಿಗೆ ಹಂಸ್, ನಗರದ ಸರಕಾರಿ ಕಲಾ ಕಾಲೇಜಿನ ಆವರಣದಲ್ಲಿದ್ದರು. ಕೈಲಿ ಪುಸ್ತಕವಿತ್ತು . ಅಂಗಿಯ ಜೇಬಲ್ಲಿ ಪೆನ್ನು !
ಅರೆ, ಹಂಸಲೇಖಾ ಅವರು ಇಲ್ಲಿ ಬಂದರೇಕೆ ಎಂದು ಪ್ರಶ್ನೆಗಳು ಏಳುವ ಮುನ್ನವೇ ಅವರು ತಾವಾಗಿಯೇ ಹೇಳಿದರು. ಈ ಮೊದಲು ಓದಲು ಸಾಧ್ಯವಾಗಿರಲಿಲ್ಲ . ಕನ್ನಡದಲ್ಲಿ ಎಂ.ಎ. ಮಾಡಬೇಕಂತ ತುಂಬ ಆಸೆಯಿತ್ತು . ಈಗ ಅದನ್ನು ಈಡೇರಿಸಿಕೊಳ್ತಿದೀನಿ.
ಅರೆ, ಸಿನಿಮಾದಲ್ಲಿ ಸದಾ ಹಾರ್ಮೋನಿಯಂ, ತಬಲಾಗಳ ಮಧ್ಯೆಯೇ ಕಳೆದುಹೋಗ್ತಿದ್ರಲ್ಲ ... ಈಗ ಹೇಗೆ ವೇಳೆ ಕಳಿತೀರಿ ಎಂದು ಕೇಳಿದರೆ ಹಂಸ್ ತಕ್ಷಣ ಉತ್ತರಿಸುತ್ತಾರೆ. ಕನ್ನಡ ಸಾಹಿತ್ಯದ ಬಗ್ಗೆ ಅದರಲ್ಲೂ ಕೇಶೀರಾಜನ ಶಬ್ದಮಣಿದರ್ಪಣಂ ಬಗ್ಗೆ ತಿಳಿಯಬೇಕು ಅಂತ ನನಗೆ ವಿಪರೀತ ಆಸೆಯಿತ್ತು . ಈಗ ಎಂ.ಎ. ನೆಪದಲ್ಲಿ ಅದಕ್ಕೊಂದು ಅವಕಾಶ ಸಿಕ್ಕಿದೆ.
... ಸಿನಿಮಾಕ್ಕೆ ಹಾಡು ಬರೆಯೋವಾಗ, ಬೇರೆ ಯಾರದೋ ಹಾಡಿಗೆ ಟ್ಯೂನ್ ಹಾಕೋವಾಗ ಇರ್ತದಲ್ಲ, ಅದರ ದುಪ್ಪಟ್ಟು ಶ್ರದ್ಧೆ ಈಗ ಅಭ್ಯಾಸದ ಮೇಲಿದೆ. ನನ್ನ ಜೊತೆ ಕಲಿಯಲಿಕ್ಕೆ ವಿವಿಧ ರಂಗಗಳಲ್ಲಿರೋ ಮಂದಿ ಬಂದಿದ್ದರು. ಅವರೆಲ್ಲರ ಉತ್ಸಾಹ, ಕಲಿಕೆಯಲ್ಲಿನ ಶ್ರದ್ಧೆ ನೋಡಿ ನನಗೂ ಉತ್ಸಾಹ ಬಂದಿದೆ ಎಂದರು ಹಂಸ್.
ಸದಾ ಅಧ್ಯಯನ... ಅಧ್ಯಯನ ಅಂತಿದ್ದೀರಲ್ಲ . ಹಾಗಾದ್ರೆ ಸಿನಿಮಾದ ಸಹವಾಸದಿಂದ ದೂರಾಗ್ತೀರಾ ಅಂದರೆ ಹಂಸ್ ತಕ್ಷಣ ಹೇಳುತ್ತಾರೆ :
ಶಾಲೆಗೆ ಹೋದಾಕ್ಷಣಕ್ಕೆ ಮಕ್ಕಳು ಆಟವಾಡೋದು ಬಿಡ್ತಾರಾ? ಇಲ್ಲ ತಾನೇ? ಹಾಗೇ ನಾನೂ ಸಿನಿಮಾ ರಂಗದಲ್ಲೇ ಬದುಕಬೇಕು ಅಂತ ವರ್ಷಗಳ ಹಿಂದೆಯೇ ನಿರ್ಧರಿಸಿದ್ದಾಗಿದೆ. ಸ್ಪರ್ಧೆ ಎಲ್ಲಿರೋದಿಲ್ಲ ಹೇಳಿ, ಅದಿರಲಿ ಈಗ ನಂಗೆ ಸ್ಪರ್ಧೆ ನೀಡ್ತಿರೋರು ಯಾರು? ಅವರೂ ನಮ್ಮ ಹುಡುಗರೇ ತಾನೇ? ವರ್ಷಗಳ ಹಿಂದೆ ನಾನು ಮೆರೆದೆ. ಈಗ ಅವರ ಪಾಳಿ. ಅವರೂ ಮೆರೀಲಿ ಬಿಡಿ. ನನಗಿಂತ ಕಿರಿಯರು ನಲಿಯೋದನ್ನ ಖುಷಿಯಿಂದ ನೋಡುತ್ತಲೇ ನಾವು ಟೈಂಪಾಸ್ ಮಾಡಬಾರದೇಕೆ?
ಹಂಸ್ ಪ್ರಶ್ನೆ ಕೇಳಿಯೇ ಮಾತು ಮುಗಿಸುತ್ತಾರೆ.
(ವಿಜಯ ಕರ್ನಾಟಕ)


Click it and Unblock the Notifications