‘ಸೈನೈಡ್’ ಮುಗೀತು! ಇನ್ಮುಂದೆ ವೀರಪ್ಪನ್ಬೇಟೆ!
ರಾಜೀವ್ ಗಾಂಧಿ ಹಂತಕರ ಬೇಟೆಯನ್ನು ‘ಸೈನೈಡ್’ ಸಿನಿಮಾದಲ್ಲಿ ತೆರೆದಿಟ್ಟ ನಿರ್ದೇಶಕ ಎ.ಎಂ.ಆರ್.ರಮೇಶ್, ಇನ್ನೊಂದು ಬೇಟೆಗೆ ಸಿದ್ಧತೆ ನಡೆಸಿದ್ದಾರೆ. ಅದು ರಾಜಬೇಟೆ! ವರನಟ ರಾಜ್ಕುಮಾರ್ರನ್ನು ಅಪಹರಿಸಿದ ನರಹಂತಕ ವೀರಪ್ಪನ್ ಬೇಟೆ!
ವೀರಪ್ಪನ್ ನೆರಳಲ್ಲಿ ರಾಜ್ಕುಮಾರ್ 108 ದಿನ ವನವಾಸ ಅನುಭವಿಸಿದ್ದು, ಮಾರಡಗಿ ನಾಗಪ್ಪ ಆತನಿಂದ ತಪ್ಪಿಸಿಕೊಂಡು ಬಂದದ್ದು, ಅಂತಿಮವಾಗಿ ಕಾರ್ಯಾಚರಣೆಯಲ್ಲಿ ವೀರಪ್ಪನ್ ಹಾಗೂ ಆತನ ತಂಡದ ಇತರರು ಹತರಾದ ಘಟನೆಗಳನ್ನು ಸಿನಿಮಾದಲ್ಲಿ ಹೇಳಲು ರಮೇಶ್, ಸಾಕಷ್ಟು ಹೋಮ್ವರ್ಕ್ ಮಾಡುತ್ತಿದ್ದಾರೆ.
ಈ ನಿಮಿತ್ತ ಮೈಸೂರು ಕಾರಾಗೃಹದಲ್ಲಿರುವ ವೀರಪ್ಪನ್ ಸಹಚರರನ್ನು ರಮೇಶ್ ಸಂಪರ್ಕಿಸಿದ್ದಾರೆ. ತಮಿಳು ರಾಷ್ಟ್ರೀಯ ಚಳವಳಿ ನಾಯಕ ನೆಡುಮಾರನ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದಾರೆ. ಮಲೆಮಹಾದೇಶ್ವರ ಬೆಟ್ಟವನ್ನೂ ಕಂಡುಬಂದಿದ್ದಾರೆ. ಎಲ್ಲವೂ ಸರಿ ರಾಜ್ ಪಾತ್ರ ಯಾರು ಮಾಡ್ತಾರೆ ಎಂಬ ಪ್ರಶ್ನೆಗೆ ಅವರಿಗೆ ಉತ್ತರ ಸಿಕ್ಕಿಲ್ಲ. ನಿಮಗೆ ಹೊಳೆದರೆ ನಮಗೆ ತಿಳಿಸಬಹುದು.
ಚಿತ್ರ 2007ರಲ್ಲಿ ತೆರೆಗೆ ಬರಬಹುದು. ವರ್ಷಕ್ಕೊಂದು ವಿಶಿಷ್ಟ ಚಿತ್ರ ನೀಡೋ ಹಂಬಲ ರಮೇಶ್ ಅವರದು. ಈ ಹಿಂದೆ ‘ವೀರಪ್ಪನ್’ ಚಿತ್ರ ತಯಾರಾಗಿತ್ತು. ಅದರಲ್ಲಿ ದೇವರಾಜ್ರವರು ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications