ಹಿರಿಯ ನಟ ರಾಜಾನಂದ್ ವಿಧಿವಶ
ಮೈಸೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ರಾಜಾನಂದ್ ಬುಧವಾರ (ಆ.25) ಬೆಳಗ್ಗೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು . ಪತ್ನಿ , ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ.
ರಂಗಭೂಮಿ ಹಿನ್ನೆಲೆಯ ರಾಜಾನಂದ್ ಮನೋಜ್ಞ ಅಭಿನಯಕ್ಕೆ ಹೆಸರಾಗಿದ್ದರು. 318 ಚಿತ್ರಗಳಲ್ಲಿ ನಟಿಸಿದ್ದ ರಾಜಾನಂದ್, ಕಂಠದಾನ ಕಲಾವಿದರಾಗಿಯೂ ದುಡಿದಿದ್ದರು. ಶರಣ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ಅವರು, ವಚನ ಸಾಹಿತ್ಯ ಎನ್ನುವ ಕೃತಿಯನ್ನೂ ರಚಿಸಿದ್ದರು.
ಹೃದಯ ಹಾಗೂ ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ರಾಜಾನಂದ್ ಮೈಸೂರಿನ ಬಾಲಗಂಗಾಧರನಾಥ ಸ್ವಾಮಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ಸಕ್ಕರೆ ಕಾಯಿಲೆ ಕೂಡ ಹಿರಿಯ ನಟನನ್ನು ಹಣ್ಣು ಮಾಡಿತ್ತು .
ಒಂದೆಡೆ ಕಾಡುವ ರೋಗ ಇನ್ನೊಂದೆಡೆ ಮನೆಯಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದ ತಮ್ಮ ಕೊನೆಯ ದಿನಗಳಲ್ಲಿ ರಾಜಾನಂದ್ ಕಂಗೆಟ್ಟಿದ್ದರು. ಆಸ್ಪತ್ರೆಯ ಶುಲ್ಕ ಪಾವತಿಸಲೂ ಅವರ ಕುಟುಂಬ ಪರದಾಡುತ್ತಿತ್ತು . ಪತಿಯ ಚಿಕಿತ್ಸೆಗೆ ನೆರವು ನೀಡಿ ಎಂದು ಅವರ ಪತ್ನಿ ವಿಮಲಮ್ಮ ಮಂಗಳವಾರವಷ್ಟೇ ಚಿತ್ರರಸಿಕರು ಹಾಗೂ ಸರ್ಕಾರವನ್ನು ಕೋರಿದ್ದರು. ಅವರ ಮನವಿ ನೆನೆಗುದಿಯಲ್ಲಿರುವಾಗಲೇ ರಾಜಾನಂದ್ ಕಣ್ಣುಮುಚ್ಚಿದ್ದಾರೆ.


Click it and Unblock the Notifications